ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂಜೊ ಅಬೆ ನಿಧನಕ್ಕೆ ಮೋದಿ ಸಂತಾಪ: ಒಡನಾಟದ ಬಗ್ಗೆ ಪ್ರಧಾನಿ ಭಾವನಾತ್ಮಕ ಪತ್ರ

Last Updated 9 ಜುಲೈ 2022, 7:56 IST
ಅಕ್ಷರ ಗಾತ್ರ

ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಜೊತೆಗಿನ ಒಡನಾಟದ ಬಗ್ಗೆ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ. ಆ ಪತ್ರದಪೂರ್ಣ ಪಾಠ ಇಲ್ಲಿದೆ...

****

ನನ್ನ ಸ್ನೇಹಿತ, ಅಬೆ ಸಾನ್...

ಶಿಂಜೊ ಅಬೆ ಜಪಾನಿನ ಅಸಾಧಾರಣ ನಾಯಕ. ಜಾಗತಿಕ ಮುತ್ಸದ್ದಿ ಮತ್ತು ಭಾರತ-ಜಪಾನ್ ಬಾಂಧವ್ಯದ ಮಹಾನ್ ಮುಂದಾಳು ಆಗಿದ್ದ ಅವರು ಇನ್ನು ಮುಂದೆ ನಮ್ಮ ನಡುವೆ ಇಲ್ಲ. ಜಪಾನ್ ಮತ್ತು ಜಗತ್ತು ಮಹಾನ್ ದಾರ್ಶನಿಕನನ್ನು ಕಳೆದುಕೊಂಡಿದ್ದು, ನಾನು ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ.

ನಾನು 2007ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಜಪಾನ್ ಗೆ ಪ್ರವಾಸ ಕೈಗೊಂಡಿದ್ದಾಗ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಆ ಮೊದಲ ಭೇಟಿಯಿಂದ, ನಮ್ಮ ಸ್ನೇಹ ಕಚೇರಿಯ ವಿಚಾರಗಳು ಮತ್ತು ಅಧಿಕೃತ ಶಿಷ್ಟಾಚಾರದ ಸಂಕೋಲೆಗಳನ್ನು ಮೀರಿ ಬೆಳೆದಿತ್ತು.

ಕ್ಯೋಟೋದ ತೋಜಿ ದೇವಾಲಯದ ನಮ್ಮ ಭೇಟಿ, ಶಿಂಕನ್ಸೆನ್‌ನಲ್ಲಿನಮ್ಮ ರೈಲು ಪ್ರಯಾಣ, ಅಹಮದಾಬಾದ್‌ನಸಬರಮತಿ ಆಶ್ರಮಕ್ಕೆ ನಾವು ನೀಡಿದ್ದ ಭೇಟಿ, ಕಾಶಿಯ ಗಂಗಾರತಿ, ಟೋಕಿಯೋದಲ್ಲಿ ವಿಸ್ತೃತವಾದ ಚಹಾ ಸಮಾರಂಭ, ನಮ್ಮ ಸ್ಮರಣೀಯ ಸಂವಾದಗಳ ಪಟ್ಟಿ ನಿಜವಾಗಿಯೂ ದೀರ್ಘವಾಗಿದೆ.

ಮೌಂಟ್ ಫುಜಿಯ ತಪ್ಪಲಿನಲ್ಲಿ ನೆಲೆಗೊಂಡಿರುವ ಯಮನಾಶಿ ಪ್ರಾಂತ್ಯದ ಅವರ ಕುಟುಂಬದ ಗೃಹಕ್ಕೆ ಆಹ್ವಾನಿತನಾದ ಏಕೈಕ ಗೌರವವನ್ನು ನಾನು ಸದಾ ಗೌರವಿಸುತ್ತೇನೆ.

ಕಾರ್ಯಕ್ರದಲ್ಲಿ ಮೋದಿ,ಅಬೆ
ಕಾರ್ಯಕ್ರದಲ್ಲಿ ಮೋದಿ,ಅಬೆ

2007 ಮತ್ತು 2012 ರ ನಡುವೆ ಮತ್ತು ಇತ್ತೀಚೆಗೆ 2020ರ ನಂತರ ಅವರು ಜಪಾನ್ ಪ್ರಧಾನಿಯಾಗದಿದ್ದರೂ, ನಮ್ಮ ವೈಯಕ್ತಿಕ ಬಂಧವು ಮೊದಲಿನಂತೆಯೇ ಬಲವಾಗಿತ್ತು.

ಅಬೆ ಸಾನ್ ಅವರೊಂದಿಗಿನ ಪ್ರತಿಯೊಂದು ಭೇಟಿಯೂ ಬೌದ್ಧಿಕವಾಗಿ ಉತ್ತೇಜಕವಾಗಿತ್ತು. ಅವರು ಸದಾ ಆಡಳಿತ, ಆರ್ಥಿಕತೆ, ಸಂಸ್ಕೃತಿ, ವಿದೇಶಾಂಗ ನೀತಿ ಮತ್ತು ಇತರ ವಿವಿಧ ವಿಷಯಗಳ ಬಗ್ಗೆ ಹೊಸ ಕಲ್ಪನೆಗಳು ಮತ್ತು ಅಮೂಲ್ಯ ಒಳನೋಟಗಳಿಂದ ಕೂಡಿರುತ್ತಿದ್ದರು.

ಅವರ ಸಲಹೆಗಳು ಗುಜರಾತ್‌ಗಾಗಿನನ್ನ ಆರ್ಥಿಕ ಆಯ್ಕೆಗಳಲ್ಲಿ ನನಗೆ ಸ್ಫೂರ್ತಿ ನೀಡಿದ್ದವು. ಮತ್ತು, ಅವರ ಬೆಂಬಲವು ಜಪಾನ್ ನೊಂದಿಗೆ ಗುಜರಾತ್‌ನ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ತರುವಾಯ, ಭಾರತ ಮತ್ತು ಜಪಾನ್ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ಅಭೂತಪೂರ್ವ ಪರಿವರ್ತನೆಯನ್ನು ತರಲು ಅವರೊಂದಿಗೆ ಕೆಲಸ ಮಾಡುವುದು ನನ್ನ ಸುಯೋಗವಾಗಿತ್ತು. ಬಹುಮಟ್ಟಿಗೆ ಸಂಕುಚಿತ, ದ್ವಿಪಕ್ಷೀಯ ಆರ್ಥಿಕ ಸಂಬಂಧದಿಂದ, ಅಬೆ ಸಾನ್ ಅದನ್ನು ವಿಶಾಲವಾದ, ಸಮಗ್ರವಾದ ಆರ್ಥಿಕ ಸಂಬಂಧವಾಗಿ ಪರಿವರ್ತಿಸಲು ಸಹಾಯ ಮಾಡಿದರು, ಇದು ರಾಷ್ಟ್ರೀಯ ಪ್ರಯತ್ನದ ಪ್ರತಿಯೊಂದು ಕ್ಷೇತ್ರವನ್ನು ಒಳಗೊಂಡಿದ್ದಲ್ಲದೆ, ನಮ್ಮ ಎರಡೂ ದೇಶಗಳು ಮತ್ತು ಪ್ರದೇಶದ ಭದ್ರತೆಗೆ ನಿರ್ಣಾಯಕವಾಗಿತ್ತು.

ಚಹಾ ಕಾರ್ಯಕ್ರದಲ್ಲಿ ಮೋದಿ, ಅಬೆ
ಚಹಾ ಕಾರ್ಯಕ್ರದಲ್ಲಿ ಮೋದಿ, ಅಬೆ

ಅವರ ದೃಷ್ಟಿಯಲ್ಲಿ, ಇದು ನಮ್ಮ ಎರಡೂ ದೇಶಗಳು ಮತ್ತು ವಿಶ್ವದ ಜನರಿಗೆ ಅತ್ಯಂತ ಪರಿಣಾಮಾತ್ಮಕ ಸಂಬಂಧಗಳಲ್ಲಿ ಒಂದಾಗಿತ್ತು. ಅವರು ಭಾರತದೊಂದಿಗೆ ನಾಗರಿಕ ಪರಮಾಣು ಒಪ್ಪಂದವನ್ನು ಮುಂದುವರಿಸುವಲ್ಲಿ ದೃಢ ಸಂಕಲ್ಪವನ್ನು ಹೊಂದಿದ್ದರು - ಇದು ಅವರ ದೇಶಕ್ಕೆ ಅತ್ಯಂತ ಕಷ್ಟಕರವಾಗಿತ್ತು - ಮತ್ತು ಭಾರತದಲ್ಲಿ ಹೈಸ್ಪೀಡ್ ರೈಲಿಗೆ ಅತ್ಯಂತ ಉದಾರವಾದ ಷರತ್ತುಗಳನ್ನು ನೀಡುವಲ್ಲಿ ಅವರು ನಿರ್ಣಾಯಕರಾಗಿದ್ದರು. ಸ್ವತಂತ್ರ ಭಾರತದ ಪಯಣದಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಿನಲ್ಲಿ, ನವ ಭಾರತವು ತನ್ನ ಬೆಳವಣಿಗೆಯನ್ನು ತ್ವರಿತಗೊಳಿಸುತ್ತಿದ್ದಂತೆ ಜಪಾನ್ ಜೊತೆಜೊತೆಗೇ ಇರುವುದನ್ನು ಅವರು ಖಚಿತಪಡಿಸಿದ್ದರು.

ಭಾರತ-ಜಪಾನ್ ಸಂಬಂಧಗಳಿಗೆ ಅವರು ನೀಡಿದ ಕೊಡುಗೆಯನ್ನು ಶ್ರೀಮಂತಿಕೆಯಿಂದ ಗುರುತಿಸಲಾಗಿದ್ದು, 2021ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಗತ್ತಿನಲ್ಲಿ ನಡೆಯುತ್ತಿರುವ ಸಂಕೀರ್ಣ ಮತ್ತು ಬಹು ಸ್ಥಿತ್ಯಂತರಗಳ ಬಗ್ಗೆ ಅಬೆ ಸಾನ್ ಆಳವಾದ ಒಳನೋಟವನ್ನು ಹೊಂದಿದ್ದರು, ರಾಜಕೀಯ, ಸಮಾಜ, ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಮೇಲೆ ಅದರ ಪರಿಣಾಮವನ್ನು ನೋಡುವ ಅವರ ದೃಷ್ಟಿಕೋನ ಸಮಕಾಲೀನ ಸಮಯಕ್ಕಿಂತ ಮುಂದಿರುತ್ತಿತ್ತು. ಮಾಡಬೇಕಾದ ಆಯ್ಕೆಗಳನ್ನು ತಿಳಿದುಕೊಳ್ಳುವ ಬುದ್ಧಿವಂತಿಕೆ, ಸಂಪ್ರದಾಯಗಳ ನಡುವೆಯೂ ಸ್ಪಷ್ಟ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ತನ್ನ ಜನರನ್ನು ಮತ್ತು ಜಗತ್ತನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುವ ಅಪರೂಪದ ಸಾಮರ್ಥ್ಯದ ಬಗ್ಗೆ ಅಬೆ ಸಾನ್ಅವರಿಗೆಆಳವಾದ ಒಳನೋಟವಿತ್ತು. ಅವರ ದೂರಗಾಮಿ ನೀತಿಗಳಾದ ಅಬೆನಾಮಿಕ್ಸ್ ಜಪಾನಿನ ಅರ್ಥವ್ಯವಸ್ಥೆಗೆ ಚೈತನ್ಯ ತುಂಬಿತು ಮತ್ತು ಅವರ ಜನರ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಪುನಶ್ಚೇತನಗೊಳಿಸಿತು.

ಅವರು ನಮಗೆ ನೀಡಿದ ಅತ್ಯಂತ ದೊಡ್ಡ ಕೊಡುಗೆಗಳಲ್ಲಿ ಮತ್ತು ಅವರ ಅತ್ಯಂತ ಶಾಶ್ವತ ಪರಂಪರೆ ಹಾಗೂ ಜಗತ್ತು ಸದಾ ಋಣಿಯಾಗಿರುವ ಒಂದು ಅಂಶವೆಂದರೆ, ದೊಡ್ಡ ಬದಲಾವಣೆಗಳನ್ನು ಗುರುತಿಸುವ ಮತ್ತು ನಮ್ಮ ಸಮಯದ ಸಮಸ್ಯೆಗಳನ್ನು ಕ್ರೋಡೀಕರಿಸಿ ಅದಕ್ಕೆ ಪ್ರತಿಕ್ರಿಯಿಸುವಲ್ಲಿ ಅವರ ನಾಯಕತ್ವ. 2007ರಲ್ಲಿ ಅವರು ಭಾರತೀಯ ಸಂಸತ್ತನ್ನು ಉದ್ದೇಶಿಸಿಮಾಡಿದ ಭಾಷಣದಲ್ಲಿ ಇಂಡೋ ಪೆಸಿಫಿಕ್ ಪ್ರದೇಶವು ಸಮಕಾಲೀನ ರಾಜಕೀಯ, ವ್ಯೂಹಾತ್ಮಕ ಮತ್ತು ಆರ್ಥಿಕ ವಾಸ್ತವತೆಯಾಗಿ ಹೊರಹೊಮ್ಮಲು ಅಡಿಪಾಯ ಹಾಕಿದರು- ಈ ಪ್ರದೇಶ ಈ ಶತಮಾನದಲ್ಲಿ ಜಗತ್ತನ್ನು ರೂಪಿಸುವ ಪ್ರದೇಶವೂ ಆಗಿದೆ.

ಕಾರ್ಯಕ್ರದಲ್ಲಿ ಮೋದಿ, ಅಬೆ
ಕಾರ್ಯಕ್ರದಲ್ಲಿ ಮೋದಿ, ಅಬೆ

ಅವರು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಗೌರವ, ಅಂತಾರಾಷ್ಟ್ರೀಯ ಕಾನೂನು ಮತ್ತು ನಿಯಮಗಳ ಅನುಸರಣೆ, ಸಮಾನತೆಯ ಮನೋಭಾವದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ಶಾಂತಿಯುತ ನಡವಳಿಕೆ ಮತ್ತು ಆಳವಾದ ಆರ್ಥಿಕತೆಯಲ್ಲಿತೊಡಗಿಸಿಕೊಳ್ಳುವುದಕ್ಕೆ ಕಾರಣರಾದರು. ಈಮೂಲಕ ಹಂಚಿಕೆಯ ಸಮೃದ್ಧಿಯ ಮನೋಭಾವದಿಂದ ಅಂತಾರಾಷ್ಟ್ರೀಯ ಸಂಬಂಧಗಳ ಶಾಂತಿಯುತ ನಡವಳಿಕೆಗೆ ಅವರು ಆಳವಾಗಿ ಗೌರವಿಸಲಾದ ಮೌಲ್ಯಗಳ ಆಧಾರದ ಮೇಲೆ ಅದರ ಸ್ಥಿರ ಮತ್ತು ಸುಭದ್ರ, ಶಾಂತಿಯುತ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಚೌಕಟ್ಟನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು.

ಕ್ವಾಡ್, ಆಸಿಯಾನ್ ನೇತೃತ್ವದ ವೇದಿಕೆಗಳು, ಇಂಡೋ ಪೆಸಿಫಿಕ್ ಸಾಗರಗಳ ಉಪಕ್ರಮ, ಏಷ್ಯಾ-ಆಫ್ರಿಕಾ ಬೆಳವಣಿಗೆ ಕಾರಿಡಾರ್ ಮತ್ತು ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯಕ್ಕಾಗಿ ಒಕ್ಕೂಟ ಇವೆಲ್ಲವೂ ಅವರ ಕೊಡುಗೆಗಳಿಂದ ಪ್ರಯೋಜನ ಪಡೆದಿವೆ. ಸದ್ದಿಲ್ಲದೆ ಮತ್ತು ಯಾವುದೇ ಅಬ್ಬರವಿಲ್ಲದೆ, ಸ್ವದೇಶದಲ್ಲಿ ಹಿಂಜರಿಕೆ ಮತ್ತು ವಿದೇಶಗಳಲ್ಲಿನ ಸಂದೇಹಗಳನ್ನು ನಿವಾರಿಸಿ, ಭಾರತ ಪೆಸಿಫಿಕ್ ಪ್ರದೇಶದಾದ್ಯಂತ ರಕ್ಷಣೆ, ಸಂಪರ್ಕ, ಮೂಲಸೌಕರ್ಯ ಮತ್ತು ಸುಸ್ಥಿರತೆ ಸೇರಿದಂತೆ ಜಪಾನಿನ ವ್ಯೂಹಾತ್ಮಕ ಪಾಲ್ಗೊಳ್ಳುವಿಕೆಯನ್ನು ಅವರು ಪರಿವರ್ತಿಸಿದರು. ಅದಕ್ಕಾಗಿ, ಈ ಪ್ರದೇಶವು ತನ್ನ ಭವಿಷ್ಯದ ಬಗ್ಗೆ ಹೆಚ್ಚು ಆಶಾವಾದಿಯಾಗಿದೆ ಮತ್ತು ಜಗತ್ತು ತನ್ನ ಭವಿಷ್ಯದ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಹೊಂದಿದೆ.

ಈ ವರ್ಷದ ಮೇ ತಿಂಗಳಲ್ಲಿ ನಾನು ಜಪಾನ್ ಗೆ ಭೇಟಿ ನೀಡಿದ್ದಾಗ, ಆಗ ತಾನೆ ಜಪಾನ್-ಭಾರತ ಸಂಘಟನೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಅಬೆ ಸಾನ್ ಅವರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು. ಅವರು ತಮ್ಮ ಎಂದಿನ ಸ್ಫೂರ್ತಿ- ಶಕ್ತಿಯುತ, ಮನಮೋಹಕ, ವರ್ಚಸ್ವಿ ಮತ್ತು ತುಂಬಾ ಹಾಸ್ಯಭರಿತ ಮನೋಭಾವದಲ್ಲಿದ್ದರು. ಭಾರತ-ಜಪಾನ್ ಸ್ನೇಹವನ್ನು ಮತ್ತಷ್ಟು ಬಲಪಡಿಸುವುದು ಹೇಗೆ ಎಂಬುದರ ಬಗ್ಗೆ ಅವರು ನಾವೀನ್ಯಪೂರ್ಣ ಆಲೋಚನೆಗಳನ್ನು ಹೊಂದಿದ್ದರು. ಆ ದಿನ ನಾನು ಅವರಿಗೆ ಶುಭವಿದಾಯ ಹೇಳಿದಾಗ, ಅದು ನಮ್ಮ ಅಂತಿಮ ಭೇಟಿಯಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಅವರ ಆತ್ಮೀಯತೆ ಮತ್ತು ಬುದ್ಧಿವಂತಿಕೆ, ಕೃಪೆ ಮತ್ತು ಔದಾರ್ಯ, ಸ್ನೇಹ ಮತ್ತು ಮಾರ್ಗದರ್ಶನಕ್ಕಾಗಿ ನಾನು ಸದಾ ಋಣಿಯಾಗಿರುತ್ತೇನೆ ಮತ್ತು ನಾನು ಅವರನ್ನು ಕಳೆದುಕೊಂಡಿದ್ದೇನೆ.

ಅವರು ನಮ್ಮನ್ನು ಮುಕ್ತ ಹೃದಯದಿಂದ ಆಲಂಗಿಸಿಕೊಂಡಿದ್ದಂತೆಯೇ, ಅವರ ನಿಧನಕ್ಕೆ ಭಾರತದಲ್ಲಿರುವ ನಾವು ಶೋಕಿಸುತ್ತೇವೆ. ಅವರು ತನ್ನ ಜನರನ್ನು ಪ್ರೇರೇಪಿಸುತ್ತಾ- ತಾವು ಹೆಚ್ಚು ಪ್ರೀತಿಸಿದ ಕೆಲಸವನ್ನು ಮಾಡಿ ಅಗಲಿದ್ದಾರೆ. ಅವರ ಜೀವನವು ದುರಂತದಲ್ಲಿ ಕೊನೆಗೊಂಡಿರಬಹುದು, ಆದರೆ ಅವರ ಪರಂಪರೆಯು ಶಾಶ್ವತವಾಗಿ ಉಳಿಯುತ್ತದೆ.

ನಾನು ಭಾರತದ ಜನತೆಯ ಪರವಾಗಿ ಜಪಾನಿನ ಜನತೆಗೆ, ವಿಶೇಷವಾಗಿ ಶ್ರೀಮತಿ ಅಕಿ ಅಬೆ ಮತ್ತು ಅವರ ಕುಟುಂಬಕ್ಕೆ ನನ್ನ ಪರವಾಗಿ ಹೃದಯಾಂತರಾಳದ ಸಂತಾಪಗಳನ್ನು ಸಲ್ಲಿಸುತ್ತೇನೆ.

–ಓಂ ಶಾಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT