ಚಂಡೀಗಡ: ಪಂಜಾಬ್ ಕಾಂಗ್ರೆಸ್ಮುಖ್ಯಸ್ಥ ಸ್ಥಾನಕ್ಕೆ ಹಠಾತ್ತಾಗಿ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು, ಯಾವುದೇ ಹುದ್ದೆ ಇರಲಿ ಅಥವಾ ಇಲ್ಲದಿರಲಿ ತಾವು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ನಿಲ್ಲುವುದಾಗಿ ಶನಿವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅಧಿಕಾರ ವಹಿಸಿಕೊಂಡ ನಂತರ ಕೆಲವು ನೇಮಕಾತಿಗಳಿಂದಾಗಿ ಅಸಮಾಧಾನಗೊಂಡಿದ್ದ ನವಜೋತ್ ಸಿಂಗ್ ಸಿಧು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರನ್ನು ಸಮಾಧಾನಪಡಿಸಲು ಪ್ರಯತ್ನಗಳು ನಡೆದಿದ್ದವು. ಆದರೆ, ರಾಜೀನಾಮೆಯನ್ನು ಅಂಗೀಕರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
'ಗಾಂಧಿ ಜೀ ಮತ್ತು ಶಾಸ್ತ್ರಿ ಜೀ ಅವರ ತತ್ವಗಳನ್ನು ಎತ್ತಿಹಿಡಿಯುತ್ತೀರಾ... ನನಗೆ ಯಾವುದೇ ಹುದ್ದೆಯನ್ನು ನೀಡಿದರೂ, ಇಲ್ಲದಿದ್ದರೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜೊತೆ ನಿಲ್ಲುತ್ತೇನೆ. ಎಲ್ಲಾ ನಕಾರಾತ್ಮಕ ಶಕ್ತಿಗಳು ನನ್ನನ್ನು ಸೋಲಿಸಲು ಪ್ರಯತ್ನಿಸಿದರೂ, ಸಕಾರಾತ್ಮಕ ಶಕ್ತಿಗಳಿಂದ ಪಂಜಾಬ್, ಪಂಜಾಬಿಯತ್ (ಯೂನಿವರ್ಸಲ್ ಬ್ರದರ್ಹುಡ್) ಗೆಲ್ಲುತ್ತದೆ ಮತ್ತು ಪ್ರತಿ ಪಂಜಾಬಿಗರು ಗೆಲ್ಲುತ್ತಾರೆ!!' ಎಂದು ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯಂದು ಸಿಧು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.
Will uphold principles of Gandhi Ji & Shastri Ji … Post or No Post will stand by @RahulGandhi & @priyankagandhi ! Let all negative forces try to defeat me, but with every ounce of positive energy will make Punjab win, Punjabiyat (Universal Brotherhood) win & every punjabi win !! pic.twitter.com/6r4pYte06E
— Navjot Singh Sidhu (@sherryontopp) October 2, 2021
ಟ್ವೀಟ್ನಲ್ಲಿ ಮಹಾತ್ಮ ಗಾಂಧಿ ಮತ್ತು ಶಾಸ್ತ್ರಿಯವರ ಫೋಟೋಗಳನ್ನು ಸಿಧು ಪೋಸ್ಟ್ ಮಾಡಿದ್ದಾರೆ.
'ತಾನು ಕಾಂಗ್ರೆಸ್ ಜೊತೆಗೆ ಇಲ್ಲ'. 'ನಾನು ಕಾಂಗ್ರೆಸ್ನಲ್ಲಿ ಉಳಿಯುತ್ತಿಲ್ಲ ಹಾಗೇ ಬಿಜೆಪಿಗೂ ಸೇರುತ್ತಿಲ್ಲ' ಎಂದು ಸ್ಪಷ್ಟಪಡಿಸಿದ ಅಮರಿಂದರ್ ಸಿಂಗ್ ಅವರು, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ರಾಜ್ಯಕ್ಕೆ ತಕ್ಕನಾದ ವ್ಯಕ್ತಿಯಲ್ಲ. 'ಆತನನ್ನು ಎಲ್ಲಿಂದಲೂ ಗೆಲ್ಲಲು ಬಿಡುವುದಿಲ್ಲ' ಎಂದಿದ್ದಾರೆ.
ಸಿಧು ರಾಜೀನಾಮೆಯು ಪಕ್ಷದಲ್ಲಿ ಗೊಂದಲಕ್ಕೆ ಕಾರಣವಾದ ನಂತರ, ಮುಖ್ಯಮಂತ್ರಿ ಚರಣ್ಜಿತ್ ಚನ್ನಿ ಅವರು ಸಿಧು ಅವರನ್ನು ಭೇಟಿಯಾದರು. ಪಕ್ಷದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಕ್ಷದ ಸಮನ್ವಯ ಸಮಿತಿಯನ್ನು ರಚಿಸಲು ಒಪ್ಪಲಾಗಿದ್ದು, ಸಿಧು ಅವರನ್ನು ಸಮಿತಿಯ ಭಾಗವನ್ನಾಗಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.