ನವದೆಹಲಿ: ರಾಷ್ಟ್ರಪತಿ ಚುನಾವಣೆಯು ದೇಶದ ದಿಕ್ಕನ್ನು ನಿರ್ಧರಿಸಲಿದ್ದು, ಪ್ರಜಾಪ್ರಭುತ್ವ ಉಳಿಯುತ್ತದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ ಎಂದು ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತಸಿನ್ಹಾ ಸೋಮವಾರ ಹೇಳಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಜುಲೈ 21ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಎನ್ಡಿಎಯೇತರ ಪಕ್ಷಗಳು ದ್ರೌಪದಿ ಮುರ್ಮು ಅವರಿಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಆತ್ಮಸಾಕ್ಷಿಗೆ ತಕ್ಕಂತೆ ಮತ ಚಲಾಯಿಸುವಂತೆ ಸಿನ್ಹಾ ಮನವಿ ಮಾಡಿದ್ದಾರೆ.
ಮಹತ್ವದ ಚುನಾವಣೆ ಇದಾಗಿದೆ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆಯೋ ಅಥವಾ ನಿಧಾನವಾಗಿ ಕೊನೆಗೊಳ್ಳುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ. ನನಗೆ ಲಭಿಸುತ್ತಿರುವ ಸೂಚನೆಯ ಪ್ರಕಾರ ಪ್ರಜಾಪ್ರಭುತ್ವದ ಅಂತ್ಯದತ್ತ ಸಾಗುತ್ತಿದೆ ಎಂದು ಹೇಳಿದರು.
ಇಲ್ಲಿ ಯಾವುದೇ ಪಕ್ಷ ವಿಪ್ ಜಾರಿಗೊಳಿಸಿಲ್ಲ. ರಹಸ್ಯ ಮತದಾನ ನಡೆಯುತ್ತಿದ್ದು, ಎಲ್ಲ ಸಂಸದರು ಹಾಗೂ ಶಾಸಕರು ವಿವೇಚನೆಯನ್ನು ಬಳಸಿ ಪ್ರಜಾಪ್ರಭುತ್ವವನ್ನು ಉಳಿಸಲು ತಮ್ಮನ್ನು ಬೆಂಬಲಿಸುವಂತೆ ಸಿನ್ಹಾ ಮನವಿ ಮಾಡಿದರು.
ಇದು ಕೇವಲ ರಾಜಕೀಯ ಹೋರಾಟವಲ್ಲ, ಸರ್ಕಾರಿ ಏಜೆನ್ಸಿಗಳ ವಿರುದ್ಧದ ಹೋರಾಟವೂ ಆಗಿದೆ ಎಂದು ಅವರು ಉಚ್ಚರಿಸಿದರು.