ಚಂಡೀಗಢ: ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ರಾಜ್ಯಪಾಲರ ನಡುವೆ ತಲೆದೋರಿದ್ದ ಬಿಕ್ಕಟ್ಟು ಶಮನಗೊಂಡಿದೆ.
ಸೆಪ್ಟೆಂಬರ್ 27ರಂದು ಒಂದು ದಿನದ ವಿಧಾನಸಭೆ ಅಧಿವೇಶನ ನಡೆಸಲು ರಾಜ್ಯ ಸರ್ಕಾರದ ಕೋರಿಕೆಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅನುಮತಿ ನೀಡಿದ್ದಾರೆ.
ಸೆಪ್ಟೆಂಬರ್ 22ರಂದು ವಿಶ್ವಾಸಮತ ಸಾಬೀತುಪಡಿಸಲು ಪಂಜಾಬ್ನ ಆಡಳಿತರೂಢ ಎಎಪಿ ಸರ್ಕಾರವು ಕರೆದಿದ್ದ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅನುಮತಿ ನಿರಾಕರಿಸಿದ್ದರು.
ಇದು ಭಿನ್ನಮತಕ್ಕೆ ಕಾರಣವಾಗಿತ್ತು. ಅಲ್ಲದೆ ರಾಜ್ಯಪಾಲರ ಕ್ರಮದ ವಿರುದ್ದ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದ್ದರು.
ಸೆ. 27ರಂದು ನಿಗದಿಯಾಗಿದ್ದ ಅಧಿವೇಶನಕ್ಕೆ ಸಂಬಂಧಿಸಿದಂತೆ ಶಾಸಕಾಂಗದ ವ್ಯವಹಾರದ ವಿವರಗಳನ್ನು ರಾಜ್ಯಪಾಲರ ಕಚೇರಿಯು ಕೇಳಿತ್ತು. ಇದರ ವಿರುದ್ಧ ವಾಗ್ದಾಳಿ ನಡೆಸಿದ್ದ ಎಎಪಿ, ರಾಜ್ಯಪಾಲರು ಬಿಜೆಪಿಯ ಅಣತಿಯಂತೆ ವರ್ತಿಸುತ್ತಿದ್ದಾರೆಎಂದು ಆರೋಪಿಸಿತ್ತು.
ಈಗ ವಿವಿಧ ವಿಷಯಗಳ ಕುರಿತು ಚರ್ಚಿಸಲು ಪಂಜಾಬ್ ಸರ್ಕಾರವು ಕರೆದಿರುವ ಅಧಿವೇಶನಕ್ಕೆ ಗವರ್ನರ್ ಅನುಮತಿ ನೀಡಿದ್ದಾರೆ.