ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿಯನ್ನು ನಿರ್ಮಿಸಿರುವ ವರದಿಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
‘ನಿಮ್ಮ ಈ ಭರವಸೆಯನ್ನು ನೆನಪಿಡಿ– ಭಾರತವನ್ನು ಯಾವ ದೇಶದ ಎದರೂ ತಲೆಬಾಗಿ ನಿಲ್ಲಲು ಅವಕಾಶ ನೀಡುವುದಿಲ್ಲ‘ ಎಂದು ಪ್ರಧಾನಿ ಮೋದಿಯವರ ಹೇಳಿಕೆಯನ್ನು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಚೀನಾ ವಿವಾದಿತ ಭೂಪ್ರದೇಶದಲ್ಲಿ ಹಳ್ಳಿ ನಿರ್ಮಿಸಿದೆ ಎಂಬ ವರದಿಯ ತುಣುಕನ್ನು ಟ್ವೀಟ್ ಜತೆ ಜೋಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಅವರೂ ಪ್ರಧಾನಿಯವರ ವಿರುದ್ಧ ಹರಿ ಹಾಯ್ದಿದ್ದು, ‘ಮೋದಿಜಿ ಎಲ್ಲಿದೆ ನಿಮ್ಮ 56 ಇಂಚಿನ ಎದೆ‘ ಎಂದು ಟ್ವಿಟರ್ನಲ್ಲಿ ಕೇಳಿದ್ದಾರೆ.
ಅರುಣಾಚಲ ಪ್ರದೇಶ ಮತ್ತು ಟಿಬೆಟ್ಗಡಿಯ ವಿವಾದಿತ ಸ್ಥಳದಲ್ಲಿ ಚೀನಾ 100 ಮನೆಗಳ ಗ್ರಾಮವನ್ನು ನಿರ್ಮಿಸಿದೆ. ಎರಡು ರಸ್ತೆಗಳನ್ನು ನಿರ್ಮಿಸಿದೆ ಎಂದು ಬಿಜೆಪಿ ಸಂಸದ ತಾಪಿರ್ ಗಾವೊ ಹೇಳಿದ್ದಾರೆ. ಅವರ ಆರೋಪದ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಸೋಮವಾರ ಕೇಳಿದ್ದರು.
ಬಿಜೆಪಿಯ ಸಂಸದರ ಆರೋಪ ನಿಜವಾಗಿದ್ದರೆ, ಕೇಂದ್ರ ಸರ್ಕಾರ ಈಗಲೇ ಚೀನಾಕ್ಕೆ ಕ್ಲೀನ್ ಚಿಟ್ ನೀಡುತ್ತದೆಯೇ ಅಥವಾ ಹಿಂದಿನ ಸರ್ಕಾರದ ಮೇಲೆ ಆರೋಪ ಹೊರಿಸುತ್ತದೆಯೋ ಎಂದು ಚಿದಂಬರಂ ಪ್ರಶ್ನಿಸಿದ್ದರು.
ಸಂಸದ ತಾಪಿರ್ ಅವರ ಆರೋಪ ನಿಜವಾದರೆ, ಚೀನಾ ಗಡಿ ಪ್ರದೇಶದಲ್ಲಿದ್ದ ಯಥಾಸ್ಥಿತಿಯನ್ನು ಮಾರ್ಪಡಿಸಿ, ವಿವಾದಿತ ಭೂಪ್ರದೇಶವನ್ನು ಪರಿವರ್ತಿಸಿ ಚೀನಾದ ಪ್ರಜೆಗಳಿಗೆ ಕಾಯಂ ನಿರಾಶ್ರಿತ ತಾಣವನ್ನಾಗಿ ಪರಿವರ್ತಿಸಿರುವುದು ಸ್ಪಷ್ಟವಾಗುತ್ತದೆ‘ ಎಂದು ಚಿದಂಬರಂ ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು.