ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನೀಟ್, ಜೆಇಇ ಪರೀಕ್ಷೆ ಸಮಸ್ಯೆಗಳ ಬಗ್ಗೆ ಮಾತನಾಡಬಹುದು ಎಂದು ವಿದ್ಯಾರ್ಥಿಗಳು ಭಾವಿಸಿದ್ದರು. ಆದರೆ ಅವರು ಆಟಿಕೆಗಳ ಬಗ್ಗೆ ಮಾತನಾಡಿದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿಯವರು, ‘ದೇಶೀಯವಾಗಿ ಆಟಿಕೆಗಳನ್ನು ಅಭಿವೃದ್ಧಿಪಡಿಸಲು ಇದು ಸಕಾಲವಾಗಿದ್ದು, ಸ್ಥಳೀಯವಾಗಿ ಆಟಿಕೆಗಳ ತಯಾರಿಸಲು ಹೊಸದಾಗಿ ನವೋದ್ಯಮಗಳನ್ನು ಆರಂಭಿಸಬೇಕೆಂದು’ ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಜಿಇಇ–ನೀಟ್ ಅಭ್ಯರ್ಥಿಗಳು ಪ್ರಧಾನಿಯವರಿಂದ ‘ಪರೀಕ್ಷಾ ಪೆ ಚರ್ಚಾ’ ಬಯಸಿದ್ದರು. ಆದರೆ ಪ್ರಧಾನಿಯವರು ‘ಖಿಲೋನೆ ಪೆ ಚರ್ಚಾ’ ಮಾಡಿದರು’ ಎಂದು ಉಲ್ಲೇಖಿಸಿದ್ದಾರೆ.
JEE-NEET aspirants wanted the PM do ‘Pariksha Pe Charcha’ but the PM did ‘Khilone Pe Charcha’.#Mann_Ki_Nahi_Students_Ki_Baat
ಸೆಪ್ಟೆಂಬರ್ 1ರಿಂದ ಆರಂಭಗೊಳ್ಳಲಿರುವ ಜಿಇಇ–ನೀಟ್ ಪರೀಕ್ಷೆಗಳನ್ನು ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಮುಂದೂಡಬೇಕು ಎಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಹಲವೆಡೆ ಈಗಾಗಲೇ ಪ್ರತಿಭಟನೆಯನ್ನೂ ನಡೆಸಿದೆ.