ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿಗಳ ಸ್ವಾತಂತ್ರ್ಯೋತ್ಸವ ಭಾಷಣದ ಪ್ರಮುಖಾಂಶಗಳು

Last Updated 14 ಆಗಸ್ಟ್ 2021, 15:18 IST
ಅಕ್ಷರ ಗಾತ್ರ

ದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಶನಿವಾರ ಮಾತನಾಡಿದ್ದಾರೆ.

ದೇಶದ ಅಭಿವೃದ್ಧಿ, ಒಲಿಂಪಿಕ್ಸ್‌ ನಲ್ಲಿನ ಸಾಧನೆ, ಸೈನಿಕರು, ಕೋವಿಡ್‌ ವಾರಿಯರ್‌ಗಳ ತ್ಯಾಗ, ಬಲಿದಾನ, ಎಲ್ಲ ರಂಗಗಳಲ್ಲಿನ ಮಹಿಳೆಯರ ಸಾಧನೆ, ಕೃಷಿ ಪ್ರಗತಿ ಕುರಿತು ರಾಷ್ಟ್ರಪತಿಗಳು ಮಾತನಾಡಿದ್ದಾರೆ.

ದೇಶದ ನಾಗರಿಕರಿಗೆ ಅವರು ಇದೇ ವೇಳೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನೂ ಕೋರಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ವಿವರ

– ಸ್ವಾತಂತ್ರ್ಯ ದಿನಾಚರಣೆ ನಮಗೆ ಸ್ವಾತಂತ್ರ್ಯದ ಹಬ್ಬ. ನಮ್ಮ ಸ್ವಾತಂತ್ರ್ಯದ ಕನಸು ಹಲವಾರು ಖ್ಯಾತ ಮತ್ತು ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರ ಮೂಲಕ ಸಾಕಾರಗೊಂಡಿದೆ. ಅವರು ದೇಶಕ್ಕಾಗಿ ದೊಡ್ಡ ತ್ಯಾಗಗಳನ್ನು ಮಾಡಿದ್ದಾರೆ. ಆ ವೀರ ಹುತಾತ್ಮರ ಪುಣ್ಯ ಸ್ಮರಣೆಗೆ ನಾನು ತಲೆಬಾಗುತ್ತೇನೆ.

–ಗಣರಾಜ್ಯ ಭಾರತದ 75 ವರ್ಷಗಳ ಪಯಣವನ್ನು ಹಿಂತಿರುಗಿ ನೋಡಿದಾಗ, ನಮ್ಮ ಯಾನದ ಬಗ್ಗೆ ಹೆಮ್ಮೆ ಪಡಲು ಕಾರಣಗಳು ಸಿಗುತ್ತವೆ. ಸರಿಯಾದ ದಿಕ್ಕಿನಲ್ಲಿ ನಿಧಾನ ಮತ್ತು ಸ್ಥಿರವಾದ ಹೆಜ್ಜೆಗಳನ್ನು ಹಾಕುವುದು ತಪ್ಪು ದಾರಿಯಲ್ಲಿ ತ್ವರಿತ ಹೆಜ್ಜೆಗಳನ್ನು ಹಾಕುವುದಕ್ಕಿಂತಲೂ ಸೂಕ್ತವೆಂದು ಗಾಂಧೀಜಿ ನಮಗೆ ಕಲಿಸಿದ್ದಾರೆ.

–ಪ್ರಪಂಚವು ಭಾರತದ ಪವಾಡವನ್ನು ನೋಡುತ್ತಿದೆ, ಇದು ಸಾಂಸ್ಕೃತಿಕ ಬಹುತ್ವದ ನೆಲೆವೀಡು, ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ನಿಂತಿದೆ.

–ಇತ್ತೀಚೆಗೆ ಮುಕ್ತಾಯಗೊಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳು ತಮ್ಮ ಅದ್ಭುತ ಪ್ರದರ್ಶನದಿಂದ ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿದ್ದಾರೆ. ಭಾರತವು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ 121 ವರ್ಷಗಳಲ್ಲೇ ಅತಿ ಹೆಚ್ಚು ಪದಕಗಳನ್ನು ಗೆದ್ದಿದೆ.

–ನಮ್ಮ ಹೆಣ್ಣುಮಕ್ಕಳು ಪ್ರತಿಕೂಲ ಪರಿಸ್ಥಿತಿಗಳನ್ನೂ ಮೀರಿ ಆಟದ ಮೈದಾನದಲ್ಲಿ ವಿಶ್ವಮಟ್ಟದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕ್ರೀಡಾ ಸಾಧನೆಯ ಜೊತೆಗೇ, ಯುಗ ಬದಲಾವಣೆ ಎಂಬುದು ಮಹಿಳೆಯರ ಭಾಗವಹಿಸುವಿಕೆ ಮತ್ತು ಎಲ್ಲ ರಂಗದಲ್ಲಿನ ಮಹಿಳೆಯರ ಯಶಸ್ಸಿನಿಂದ ಸಾಧ್ಯವಾಗುತ್ತದೆ.

–ಉನ್ನತ ಶಿಕ್ಷಣದಿಂದ ಹಿಡಿದು ಸಶಸ್ತ್ರ ಪಡೆಗಳವರೆಗೆ, ಪ್ರಯೋಗಾಲಯಗಳಿಂದ ಆಟದ ಮೈದಾನಗಳವರೆಗೆ ನಮ್ಮ ಹೆಣ್ಣು ಮಕ್ಕಳು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಈ ಯಶಸ್ಸಿನಲ್ಲಿ, ಭವಿಷ್ಯದ ಅಭಿವೃದ್ಧಿ ಹೊಂದಿದ ಭಾರತದ ನೋಟವನ್ನು ನಾನು ನೋಡುತ್ತಿದ್ದೇನೆ

–ಸಾಧನೆಗೈದ ಹೆಣ್ಣುಮಕ್ಕಳ ಕುಟುಂಬವನ್ನು ಮಾದರಿಯಾಗಿಟ್ಟುಕೊಳ್ಳುವಂತೆ ನಾನು ಎಲ್ಲ ಪೋಷಕರಿಗೆ ಮನವಿ ಮಾಡುತ್ತೇನೆ. ಮತ್ತು, ಹೆಣ್ಣುಮಕ್ಕಳಿಗೆ ಅವಕಾಶಗಳನ್ನು ಕಲ್ಪಿಸಿ ಸಾಧನೆಗೆ ಹಾದಿ ಮಾಡಿಕೊಡಬೇಕೆಂದು ನಾನು ಆಶಿಸುತ್ತೇನೆ.

–ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗಿದೆ. ಆದರೆ ಕೊರೊನಾ ವೈರಸ್‌ ಇನ್ನೂ ದೂರವಾಗಿಲ್ಲ. ಅದರ ವಿನಾಶಕಾರಿ ಪರಿಣಾಮಗಳಿಂದ ನಾವು ಇನ್ನೂ ಹೊರಬಂದಿಲ್ಲ.

–ಕೋವಿಡ್‌ ಯೋಧರು, ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರು, ನಿರ್ವಾಹಕರು ಮತ್ತು ಇತರರು, ಎರಡನೇ ತರಂಗವನ್ನು ನಿಯಂತ್ರಿಸಲು ಸಕಲವನ್ನು ಪಣಕ್ಕಿಟ್ಟು ಹೋರಾಡಿದರು.

–ಇನ್ನಷ್ಟೇ ಲಸಿಕೆ ಹಾಕಿಸಿಕೊಳ್ಳಬೇಕಾದ ನಾಗರಿಕರು ಕೂಡಲೇ ಲಸಿಕೆ ಪಡೆಯಬೇಕು. ಅದರ ಮೂಲಕ ಇತರರಿಗೆ ಸ್ಫೂರ್ತಿಯಾಗಬೇಕೆಂದು ನಾನು ಮನವಿ ಮಾಡುತ್ತೇನೆ.

–ವೈದ್ಯಕೀಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ ಒಂದು ವರ್ಷದಲ್ಲಿ ₹23,220 ಕೋಟಿ ರೂಪಾಯಿಗಳನ್ನು ದೇಶ ಖರ್ಚು ಮಾಡಿರುವುದು ಹೃದಯಸ್ಪರ್ಶಿ ವಿಚಾರ.

–ಗ್ರಾಮೀಣ ಭಾರತ, ವಿಶೇಷವಾಗಿ ಕೃಷಿ ವಲಯವು ಎಲ್ಲಾ ಸಮಸ್ಯೆಗಳನ್ನು ಮೀರಿ ಬೆಳೆಯುತ್ತಲೇ ಇರುವುದು ಸಂತೋಷ ತರಿಸಿದೆ. ಭಾರತವು ಹಳ್ಳಿಗಳ ದೇಶ. ಅದನ್ನು ಅಭಿವೃದ್ಧಿಯಲ್ಲಿ ಹಿಂದುಳಿಯಲು ಬಿಡಲಾಗುವುದಿಲ್ಲ.

–ಸುಲಭವಾಗಿ ವಾಣಿಜ್ಯ–ವ್ಯಾಪಾರ ಮಾಡುವಲ್ಲಿ ಸುಧಾರಣೆಯಾದರೆ, ಅದು ಎಲ್ಲರ ಬದುಕಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ

–ಕೃಷಿ ಮಾರುಕಟ್ಟೆ ಸುಧಾರಣೆಗಳ ಸರಣಿಯು ನಮ್ಮ 'ಅನ್ನದಾತ' ರೈತರನ್ನು ಸಬಲಗೊಳಿಸುತ್ತದೆ ಮತ್ತು ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುತ್ತದೆ.

–ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಶಕೆ ಆರಂಭವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಜನರು, ವಿಶೇಷವಾಗಿ ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ.

–ನಮ್ಮ ಸಂಸತ್ತು ಪ್ರಜಾಪ್ರಭುತ್ವದ ದೇವಾಲಯ. ನಮ್ಮ ಜನರ ಯೋಗಕ್ಷೇಮಕ್ಕಾಗಿ ನಾವು ಚರ್ಚೆ ಮಾಡಲು ಮತ್ತು ಸಮಸ್ಯೆಗಳನ್ನು ನಿರ್ಧರಿಸಲು ಸಂಸತ್ತು ಅತ್ಯುನ್ನತ ವೇದಿಕೆ ಒದಗಿಸಿದೆ. ನಮ್ಮ ಸಂಸತ್ತು ಶೀಘ್ರದಲ್ಲೇ ಹೊಸ ಕಟ್ಟಡದಲ್ಲಿ ನೆಲೆಗೊಳ್ಳುವುದು ಎಲ್ಲ ಭಾರತೀಯರಿಗೂ ಹೆಮ್ಮೆಯ ವಿಷಯವಾಗಿದೆ.

–ಭಾರತವು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಬದ್ಧವಾಗಿರುವುದು ಮಾತ್ರವಲ್ಲ, ಹವಾಮಾನವನ್ನು ರಕ್ಷಿಸಲು ದೇಶವು ಒಪ್ಪಂದಕ್ಕಿಂತಲೂ ಮಿಗಿಲಾದುದ್ದನ್ನು ಮಾಡುತ್ತಿದೆ.

–ಎಲ್ಲಾ ಕೋವಿಡ್ ಯೋಧರಿಗೆ ನನ್ನ ಹೃದಯಾಂತರಾಳದ ಮೆಚ್ಚುಗೆಯನ್ನು ತಿಳಿಸಬಯಸುತ್ತೇನೆ. ಅವರಲ್ಲಿ ಹಲವರು ಕೋವಿಡ್ -19 ಗೆ ಬಲಿಯಾಗಿದ್ದಾರೆ. ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ.

–ನಾವೆಲ್ಲರೂ ‘ಮೇರಾ ಹರ್‌ ಕಾಮ್‌, ದೇಶ್‌ ಕೆ ನಾಮ್‌ (ನನ್ನ ಪ್ರತಿಯೊಂದು ಕೆಲಸ–ದೇಶದ ಹೆಸರು) ಎಂಬ ಧ್ಯೇಯವಾಕ್ಯವನ್ನು ಮಂತ್ರವಾಗಿ ಅಳವಡಿಸಿಕೊಳ್ಳಬೇಕು. ರಾಷ್ಟ್ರದ ಅಭಿವೃದ್ಧಿಗೆ ಸಂಪೂರ್ಣ ಭಕ್ತಿ ಮತ್ತು ಸಮರ್ಪಣೆಯಿಂದ ಕೆಲಸ ಮಾಡಬೇಕು.

–ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿದ, ಅಗತ್ಯವಿದ್ದಾಗ ಧೈರ್ಯದಿಂದ ಮತ್ತು ಸಂತೋಷದಿಂದ ಸರ್ವೋಚ್ಚ ತ್ಯಾಗವನ್ನೂ ಮಾಡುವ ಸಶಸ್ತ್ರ ಪಡೆಗಳ ಸದಸ್ಯರಿಗೆ ನಾನು ಶುಭಾಶಯಗಳನ್ನು ಸಲ್ಲಿಸುತ್ತೇನೆ.

–ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನದಂದು ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. 2047ರಲ್ಲಿ ನಮ್ಮ ಸ್ವಾತಂತ್ರ್ಯದ 100 ವರ್ಷಗಳ ಸಂಭ್ರಮವನ್ನು ಆಚರಿಸುವಾಗ ಭಾರತವು ಶಕ್ತಿಯುತ, ಸಮೃದ್ಧ ಮತ್ತು ಶಾಂತಿಯುತ ದೇಶವಾಗಿರಲಿದೆ ಎಂಬುದು ನನಗೆ ಖುಷಿ ತರಿಸಿದೆ.

–ಕೋವಿಡ್ ಸಾಂಕ್ರಾಮಿಕ ರೋಗದಿಂದ ಎಲ್ಲರೂ ಹೊರಬಂದು ಸಂತೋಷ ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಬೇಕು ಎಂದು ನಾನು ಬಯಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT