ನವದೆಹಲಿ: ಮುಂದಿನ 25 ವರ್ಷಗಳಲ್ಲಿ ಭವ್ಯ ಭಾರತ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಿ, ಪಂಚ ಪ್ರಾಣಗಳನ್ನು ಕೇಂದ್ರಿಕರಿಸಿ ನಾವು ಮುನ್ನಡೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಇಲ್ಲಿನ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಜೈ ಜವಾನ್, ಜೈ ಕಿಸಾನ್ ಮಂತ್ರದ ಜೊತೆಗೆಜೈ ವಿಜ್ಞಾನ್, ಜೈ ಅನುಸಂಧಾನ್ ಮಂತ್ರವನ್ನು ಸೇರಿಸಿಕೊಂಡು ನಾವು ಮುನ್ನಡೆಯಬೇಕಿದೆ ಎಂದು ಹೇಳಿದರು.
ಅನುಸಂದಾನ್ ಎಂದರೆ ಅವಿಷ್ಕಾರಗಳು ಎಂದ ಅವರು, ದೇಶದಲ್ಲಿ ಯುವ ಜನತೆಯಿಂದ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಯುವಕರಿಂದಲೇ ಡಿಜಿಟಲ್ ಕನಸಿನ ಭಾರತ ನನಸಾಗಲಿದೆ ಎಂದರು. ಮುಂದಿನ ಡಿಕೆಡ್(decade) ಅದು ಟೆಕೆಡ್(techade) ಆಗಲಿದೆ ಎಂದು ಹೇಳಿದರು.
ನಾವು ಪಂಚಪ್ರಾಣಗಳನ್ನು ಕೇಂದ್ರಿಕರಿಸಿ ಭವ್ಯ ಭಾರತದ ನಿರ್ಮಾಣದತ್ತ ಸಾಗಬೇಕಿದೆ. ಉತ್ತಮ ಭಾರತ, ಗುಲಾಮಿ ಮನಸ್ಥಿತಿ ನಿವಾರಣೆ, ದೇಶದ ಪರಂಪರೆ ಬಗ್ಗೆ ಹೆಮ್ಮೆ, ವಿವಿಧತೆಯಲ್ಲಿ ಏಕತೆ, ನಾಗರಿಕ ಕರ್ತವ್ಯಗಳಲ್ಲಿ ನಿಷ್ಠೆ ಈ ಪಂಚಪ್ರಾಣಗಳ ಬಗ್ಗೆ ನಾವು ಕೇಂದ್ರಿಕರಿಸಬೇಕಿದೆ ಎಂದು ಹೇಳಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಮತ್ತು ಬಲಿದಾನವಾದವರ ಬಗ್ಗೆ ಮಾತನಾಡಿದ ಅವರು, ದೇಶದ ಜ್ವಲಂತ ಸಮಸ್ಯೆಗಳು, ಅವಿಷ್ಕಾರಗಳು, ಡಿಜಿಟಲ್ ಭಾರತದ ಬಗ್ಗೆ ಯುವಕರ ಗಮನ ಸೆಳೆದರು.
ಭಾರತ ಬಡತನದ ವಿರುದ್ಧ ಹೋರಾಡುತ್ತಿವೆ. ಹೀಗಾಗಿ ಭ್ರಷ್ಟಾಚಾರದ ವಿರುದ್ಧವೂ ನಾವು ನಮ್ಮೆಲ್ಲ ಶಕ್ತಿಯಿಂದ ಹೋರಾಡಬೇಕಾಗಿದೆ ಎಂದು ಅವರು ತಿಳಿಸಿದರು.