ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಇನ್ನೂ 700 ಶಾಖೆಗಳನ್ನು ಆರಂಭಿಸಲು ಆರ್‌ಎಸ್‌ಎಸ್ ಗುರಿ: ವರದಿ

Last Updated 17 ನವೆಂಬರ್ 2021, 10:31 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವ್ಯಾಪ್ತಿಯನ್ನು ವಿಸ್ತರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದಾಗಿದೆ. ಅಕ್ಟೋಬರ್‌ನಲ್ಲಿ ಧಾರವಾಡದಲ್ಲಿ ನಡೆದ ಸಂಘಟನಾ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸದ್ಯ ಪಶ್ಚಿಮ ಬಂಗಾಳದಲ್ಲಿ 1,900 ಆರ್‌ಎಸ್‌ಎಸ್ ಶಾಖೆಗಳಿವೆ. 2024ರ ವೇಳೆಗೆ ಇನ್ನೂ 700 ಶಾಖೆಗಳನ್ನು ಆರಂಭಿಸುವುದು ಆರ್‌ಎಸ್‌ಎಸ್ ಗುರಿಯಾಗಿದೆ.

ಆರ್‌ಎಸ್‌ಎಸ್ ಸರಸಂಘ ಚಾಲಕ (ಮುಖ್ಯಸ್ಥ) ಮೋಹನ್ ಭಾಗವತ್ 2 ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದಾರೆ. ಭಾಗವತ್ ಮತ್ತು ಸಂಘದ ಸದಸ್ಯರ ನಡುವೆ ನಡೆದ ಚರ್ಚೆಯ ಹಲವು ಅಂಶಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಶಾಖೆಗಳ ವಿಸ್ತರಣೆಯೂ ಒಂದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಂಡಲ ಮಟ್ಟದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ ಶಾಖೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಆರ್‌ಎಸ್‌ಎಸ್‌ನ ಪಶ್ಚಿಮ ಬಂಗಾಳ ಘಟಕದ ಅಧಿಕೃತ ವಕ್ತಾರರು ‘ಡೆಕ್ಕನ್ ಹೆರಾಲ್ಡ್’ಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹೊಸ ವಲಯವನ್ನು ರಚಿಸಿ, ಮೂರು ವಲಯಗಳಾಗಿ ಕಾರ್ಯಚಟುವಟಿಕೆಯನ್ನು ವಿಸ್ತರಿಸುವ ಬಗ್ಗೆ ಮಾರ್ಚ್‌ನಲ್ಲಿ ಆರ್‌ಎಸ್‌ಎಸ್ ನಿರ್ಧಾರ ಕೈಗೊಂಡಿತ್ತು. ಇದನ್ನು 2024ರ ಒಳಗೆ ಸಂಪೂರ್ಣ ಜಾರಿಗೊಳಿಸಬೇಕು ಎಂಬ ಗುರಿಯನ್ನು ಸಂಘವು ಹೊಂದಿದೆ ಎಂದು ಅವರು ತಿಳಿಸಿದ್ದಾರೆ. 2025ಕ್ಕೆ ಆರ್‌ಎಸ್‌ಎಸ್ ಸ್ಥಾಪನೆಯಾಗಿ ನೂರು ವರ್ಷಗಳಾಗಲಿವೆ.

ಸಂಘವು ಸಮಾಜಕ್ಕಿಂತ ಭಿನ್ನವಾದುದಲ್ಲ. ಇವೆರಡನ್ನು ಹತ್ತಿರ ತರುವುದಕ್ಕಾಗಿಯೇ ಶಾಖೆಗಳ ವಿಸ್ತರಣೆಗೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ತೆರೆಯ ಮರೆಯಲ್ಲೇ ಉಳಿದಿರುವ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಂಸ್ಥೆಗಳ ಯಶೋಗಾಥೆಯನ್ನು ಜನರಿಗೆ ತಲುಪಿಸುವ ಯೋಜನೆಯನ್ನೂ ಆರ್‌ಎಸ್‌ಎಸ್ ಹಮ್ಮಿಕೊಂಡಿದೆ. ಜೀವನೋಪಾಯಕ್ಕಾಗಿ ಸಂಪಾದನೆಯ ಮಾರ್ಗವನ್ನು ಕಂಡುಕೊಳ್ಳಲು ಜನರಿಗೆ ತರಬೇತಿ ನೀಡುವಂತೆಯೂ ಸದಸ್ಯರಿಗೆ ಸೂಚಿಸಿದೆ.

ಆರ್‌ಎಸ್‌ಎಸ್ ಜತೆ ನಂಟು ಹೊಂದಿರುವ ಸುಮಾರು 40 ಸಂಘಟನೆಗಳ ಪ್ರತಿನಿಧಿಗಳ ಜತೆ ಭಾಗವತ್ ಕೋಲ್ಕತ್ತದಲ್ಲಿರುವ ಪ್ರಾದೇಶಿಕ ಪ್ರಧಾನ ಕಚೇರಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಮೌಲ್ಯಾಧಾರಿತ ಕುಟುಂಬ ವ್ಯವಸ್ಥೆಯ ಅಗತ್ಯದ ಬಗ್ಗೆಯೂ ಅವರು ಒತ್ತಿಹೇಳಿದ್ದಾರೆ. ಸುಮಾರು 350 ನಾಗರಿಕರ ಜತೆಗೂ ಅವರು ಚರ್ಚೆ ನಡೆಸಿದ್ದಾರೆ.

ಸಂಘದ ಕಾರ್ಯವ್ಯಾಪ್ತಿ ವಿಸ್ತರಣೆಯಿಂದ ಬಿಜೆಪಿಗೆ ನೆರವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದನ್ನು ಆರ್‌ಎಸ್‌ಎಸ್ ವಕ್ತಾರರು ನಿರಾಕರಿಸಿದ್ದಾರೆ.

ಬಂಗಾಳದಲ್ಲಿ ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದಲೇ ನೋಡಲಾಗುತ್ತಿದೆ. ಆದರೆ, ಸಂಘದ ಕಾರ್ಯವ್ಯಾಪ್ತಿ ವಿಸ್ತರಣೆ ನಮ್ಮದೇ ಯೋಜನೆ. ನಾವು ಚುನಾವಣೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಭಾಗವತ್ ಸ್ಪಷ್ಟಪಡಿಸಿದ್ದಾಗಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT