ಹೈದರಾಬಾದ್: ತೆಲಂಗಾಣದ ಎರಡು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಇದೇ 14ರಂದು ನಡೆಯಲಿರುವ ಚುನಾವಣೆಯ ಪ್ರಚಾರ ದಿನ ಕಳೆದಂತೆ ಬಿರುಸಿನಿಂದ ಸಾಗಿದ್ದು, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಪುತ್ರಿಎಸ್. ವಾಣಿ ದೇವಿ ಅವರು ಟಿಆರ್ಎಸ್ ಅಭ್ಯರ್ಥಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಖಮ್ಮಮ್- ನಲಗೊಂಡ-ವಾರಂಗಲ್ ಮತ್ತು ಹೈದರಾಬಾದ್-ರಂಗರೆಡ್ಡಿ-ಮೆಹಬೂಬ್ನಗರ – ಈ ಎರಡು ಪದವೀಧರರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಕಳೆದ ವರ್ಷ ಡುಬ್ಬಾಕ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ್ತು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉಂಟಾದ ಅನಿರೀಕ್ಷಿತ ಹಿನ್ನಡೆಯಿಂದ ಎಚ್ಚೆತ್ತುಕೊಂಡಿರುವ ಆಡಳಿತಾರೂಢ ಟಿಆರ್ಎಸ್ ಪಕ್ಷ, ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಎರಡೂ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಕಸರತ್ತು ನಡೆಸುತ್ತಿದೆ.
ಶಿಕ್ಷಣ ತಜ್ಞೆ ಎಸ್. ವಾಣಿ ದೇವಿ ಅವರನ್ನು ಹೈದರಾಬಾದ್–ರಂಗಾರೆಡ್ಡಿ–ಮಹಬೂಬ್ನಗರ ಕ್ಷೇತ್ರದಿಂದ ಟಿಆರ್ಎಸ್ ಕಣಕ್ಕಿಳಿಸುತ್ತಿದೆ. ಸದ್ಯ ಆ ಕ್ಷೇತ್ರದಲ್ಲಿ ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಹಾಲಿ ಎಂಎಲ್ಸಿ ಎನ್. ರಾಮಚಂದ್ರರಾವ್ ಕಣದಲ್ಲಿದ್ದಾರೆ.
ವಾಣಿ ದೇವಿ ಅವರು, ಉಪನ್ಯಾಸಕರಾಗಿದ್ದು, ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ರಾಮಚಂದ್ರ ರಾವ್ ಅವರು ಹಿರಿಯ ವಕೀಲರು.
ಖಮ್ಮಮ್- ನಲಗೊಂಡ-ವಾರಂಗಲ್ ಕ್ಷೇತ್ರದಲ್ಲಿ ಹಾಲಿ ಶಾಸಕ ಪಲ್ಲ ರಾಜೇಶ್ವರ ರೆಡ್ಡಿ ಅವರು ಟಿಆರ್ಎಸ್ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ನಿಂದ ರಾಮುಲು ನಾಯ್ಕ್ ಮತ್ತು ಬಿಜೆಪಿಯಿಂದ ಜಿ.ಪ್ರೇಮೆಂದರ್ ರೆಡ್ಡಿ ಕಣದಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.