ನವದೆಹಲಿ: ಕೋವಿಡ್–19 ಲಸಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ಪೋಸ್ಟರ್ಗಳನ್ನು ಅಂಟಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸಿರುವ ಪ್ರಕರಣವನ್ನು ನ್ಯಾಯಾಲಯದ ಗಮನಕ್ಕೆ ತರುವಂತೆ ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ಕೇಳಿದೆ.
ಕೇಂದ್ರದ ಲಸಿಕೆ ನೀತಿಯನ್ನು ಟೀಕಿಸಿ ಪೋಸ್ಟರ್ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಎಫ್ಐಆರ್ ದಾಖಲಿಸಬೇಡಿ ಎಂದು ಆದೇಶಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಪ್ರತಿಯೊಂದು ಪ್ರಕರಣದ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅರ್ಜಿದಾರರನ್ನು ಕೇಳಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರನ್ನೊಳಗೊಂಡ ಪೀಠ ಅರ್ಜಿದಾರರಾದ ಪ್ರದೀಪ್ ಕುಮಾರ್ ಯಾದವ್ ಅವರಿಗೆ, ಒಂದು ವಾರದೊಳಗೆ ಪ್ರತಿ ಪ್ರಕರಣದ ವಿವರವನ್ನು ನ್ಯಾಯಾಲಯದ ಗಮನಕ್ಕೆ ತರಲು ತಿಳಿಸಿದೆ.
’ಅರ್ಜಿಯ ಜತೆ ಕೇವಲ ಸುದ್ದಿ ಪತ್ರಿಕೆಗಳ ವರದಿಯ ತುಣುಕುಗಳನ್ನು ಸೇರಿಸಿ ತಂದರೆ ಸಾಲದು, ಈ ಪ್ರಕರಣದ ಬಗ್ಗೆ ಒಂದಷ್ಟು ಹೋಮ್ವರ್ಕ್ ಮಾಡಿಕೊಂಡು ಬರಬೇಕು’ ಎಂದು ಪೀಠ ಅರ್ಜಿದಾರರಿಗೆ ತಿಳಿಸಿದೆ.