ನವದೆಹಲಿ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ದೇಶಕ್ಕೆ ಕರೆತರಲು ಗೋಪ್ಯವಾಗಿ ಹಸ್ತಾಂತರ ಮಾಡಿಕೊಳ್ಳುವ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿತು.
ಆದರೆ, ಈ ಪ್ರಕ್ರಿಯೆಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಕೇಂದ್ರ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿತು. ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಅಶೋಕ್ ಭೂಷಣ್ ಅವರಿದ್ದ ಪೀಠವು, ‘ಹಸ್ತಾಂತರಕ್ಕೆ ಯಾವ ರೀತಿಯ ಗೋಪ್ಯ ಪ್ರಕ್ರಿಯೆ ನಡೆದಿದೆ ಎಂದು ತಿಳಿಸುವಂತೆ’ ಮಲ್ಯ ಪರ ವಕೀಲರಿಗೆ ಸೂಚಿಸಿತು.
ಮಲ್ಯ ಪರ ಹಾಜರಿದ್ದ ವಕೀಲ ಅಂಕುರ್ ಸೈಗಲ್ ಅವರು, ‘ಈ ಕುರಿತು ನನಗೆ ಮಾಹಿತಿ ಇಲ್ಲ. ಹಸ್ತಾಂತರ ಕುರಿತಂತೆ ಇದ್ದ ಮನವಿಯನ್ನು ತಳ್ಳಿಹಾಕಲಾಗಿದೆ ಎಂಬುದಷ್ಟೇ ನನಗಿರುವ ಮಾಹಿತಿ’ ಎಂದು ತಿಳಿಸಿದರು.
‘ಮಲ್ಯ ಅವರು ಎಂದು ಕೋರ್ಟ್ಗೆ ಹಾಜರಾಗಲಿದ್ದಾರೆ, ಗೋಪ್ಯ ಪ್ರಕ್ರಿಯೆ ಎಂದು ಮುಗಿಯಲಿದೆ ಎಂಬ ಮಾಹಿತಿಯನ್ನು ನವೆಂಬರ್ 2ರಂದು ತಿಳಿಸಬೇಕು’ ಎಂದು ಪೀಠವು ವಕೀಲರಿಗೆ ಸೂಚಿಸಿತು.
ತಮ್ಮ ಮಾಲೀಕತ್ವದ ಕಿಂಗ್ಫಿಷರ್ ಏರ್ಲೈನ್ಸ್ಗೆ ₹ 9000 ಕೋಟಿ ಬ್ಯಾಂಕ್ ಸಾಲ ಪಡೆದು ವಂಚಿಸಿದ ಆರೋಪ ಮಲ್ಯ ಮೇಲಿದ್ದು, ಸದ್ಯ ಯು.ಕೆ.ಯಲ್ಲಿ ತಲೆಮರೆಸಿಕೊಂಡಿದ್ದಾರೆ.