ಚೆನ್ನೈ: ಕೋವಿಡ್ ಲಾಕ್ಡೌನ್ ಕಾರಣ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ನೆರವಾಗಲು ಕೇಂದ್ರದ ಮೇಲೆ ಒತ್ತಡ ಹೇರಲು ಕೋರಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬಿಜೆಪಿಯೇತರ ಸರ್ಕಾರಗಳ 12 ಮಂದಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೆ ಈ ಕುರಿತು ಚರ್ಚಿಸಬೇಕಿದೆ ಎಂದು ಗಮನಸೆಳೆದ್ದಾರೆ. ಆಂಧ್ರಪ್ರದೇಶ, ದೆಹಲಿ, ತೆಲಂಗಾಣ, ಒಡಿಶಾ, ಕೇರಳ, ಮಹಾರಾಷ್ಟ್ರ ಸೇರಿದಂತೆ 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ.
ದೇಶದಲ್ಲಿ ಕೋವಿಡ್ ಲಸಿಕೆ ನೀತಿಯು ನಮ್ಮಗಳ ಒಟ್ಟು ಯತ್ನದ ಫಲವಾಗಿಯೇ ಬದಲಾಗಿದೆ ಎಂಬುದು ನನಗೆ ಸಂತೋಷ ಉಂಟುಮಾಡಿದೆ ಎಂದು ಉಲ್ಲೇಖಿಸಿದ್ದಾರೆ.
18–45 ವರ್ಷದವರಿಗೆ ಉಚಿತವಾಗಿ ಲಸಿಕೆಯನ್ನು ನೀಡುವ ಹೊಣೆಯನ್ನು ಈಗ ಕೇಂದ್ರವೇ ಹೊತ್ತುಕೊಂಡಿದೆ. 2020ರಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಾಲ ಮರುಪಾವತಿ ಕುರಿತು ಕೆಲ ರಿಯಾಯಿತಿ ನೀಡಲಾಗಿತ್ತು. ಈ ವರ್ಷ ಅಂತಹ ನೆರವು ನೀಡಿಲ್ಲ.2021–22ನೇ ವರ್ಷದ ಮೊದಲ ಎರಡು ತ್ರೈಮಾಸಿಕಕ್ಕೆ ಅನ್ವಯಿಸಿ ನೆರವು ನೀಡುವ ಕುರಿತು ಒತ್ತಡ ಹೇರಬೇಕಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.