ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್ಟ್‌ಅಪ್‌ ಸಂಸ್ಕೃತಿ ಬೆಳವಣಿಗೆ ಆಶಾದಾಯಕ: ಮೋದಿ

‘ಮನ್‌ ಕಿ ಬಾತ್‌’: ಹಾಕಿ ಮಾಂತ್ರಿಕ ಧ್ಯಾನ್‌ ಚಂದ್‌ಗೆ ಗೌರವ ಸಮರ್ಪಣೆ
Last Updated 29 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ನವದೆಹಲಿ: ‘ಯುವ ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆ, ಉತ್ಸಾಹ ಹೆಚ್ಚುತ್ತಿರುವ ಕಾರಣ ಭಾರತದಲ್ಲಿ ಸ್ಟಾರ್ಟ್‌ಅಪ್‌ ಸಂಸ್ಕೃತಿ ತೀವ್ರವಾಗಿ ಬೆಳೆಯುತ್ತಿದೆ. ಇದು ಆಶಾದಾಯಕ ಬೆಳವಣಿಗೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿಪ್ರಾಯಪಟ್ಟರು.

‘ಸಣ್ಣ ನಗರಗಳಲ್ಲಿರುವ ಯುವಕರು ಸಹ ಸ್ಟಾರ್ಟ್‌ಅಪ್‌ ಆರಂಭಿಸುತ್ತಿದ್ದು, ಇದು ದೇಶದ ಉಜ್ವಲ ಭವಿಷ್ಯದ ಸೂಚನೆಯಾಗಿದೆ’ ಎಂದೂ ಹೇಳಿದರು.

‘ಮನ್‌ ಕಿ ಬಾತ್‌‘ ಸರಣಿಯ ಈ ತಿಂಗಳ ಬಾನುಲಿ ಪ್ರಸಾರದಲ್ಲಿ ಅವರು ಸ್ಟಾರ್ಟ್‌ಅಪ್‌ ಕ್ಷೇತ್ರ, ದೇಶದ ಆಧ್ಮಾತ್ಮಿಕ ಪರಂಪರೆ ಹಾಗೂ ತಂತ್ರಜ್ಞಾನಗಳು ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.

‘ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಇದರ ಫಲವಾಗಿ ಬರುವ ದಿನಗಳಲ್ಲಿ ಅಂತರಿಕ್ಷದಲ್ಲಿ ಭಾರಿ ಸಂಖ್ಯೆಯ ಉಪಗ್ರಹಗಳನ್ನು ಕಾಣಬಹುದಾಗಿದೆ. ಇವುಗಳನ್ನು ನಮ್ಮ ವಿಶ್ವವಿದ್ಯಾಲಯಗಳು, ಪ್ರಯೋಗಾಲಯಗಳು ಹಾಗೂ ಅಂತರಿಕ್ಷ ಕ್ಷೇತ್ರದ ಕಂಪನಿಗಳಲ್ಲಿನ ಯುವ ಸಂಶೋಧಕರೇ ವಿನ್ಯಾಸಗೊಳಿಸಿರುತ್ತಾರೆ ಎಂಬ ವಿಶ್ವಾಸ ನನ್ನದು’ ಎಂದರು.

ಹಾಕಿ ಮಾಂತ್ರಿಕ ಧ್ಯಾನ್‌ ಚಂದ್‌ ಅವರ ಜನ್ಮದಿನದ ಸ್ಮರಣೆಗಾಗಿ ಪ್ರತಿ ವರ್ಷ ಆಗಸ್ಟ್‌ 29ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ. ಈ ಸಂದರ್ಭವನ್ನು ಪ್ರಧಾನಿ ಮೋದಿ ಕ್ರೀಡಾ ಕ್ಷೇತ್ರದ ಸಾಧನೆ–ಕನಸುಗಳನ್ನು ಜನರ ಮುಂದಿಡಲು ಬಳಸಿಕೊಂಡರು.

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿನ ಸಾಧನೆಯಿಂದ ದೇಶದ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ಸಿಕ್ಕಿದೆ’ ಎಂದ ಅವರು, ‘ನಾಲ್ಕು ದಶಕಗಳ ನಂತರ ಹಾಕಿಯಲ್ಲಿ ಪುರುಷರ ತಂಡ ಪದಕ ಗೆದ್ದಿದೆ. ಇದರಿಂದ ಪ್ರೇರಣೆಗೊಂಡಿರುವ ಯುವಕರು ಕ್ರೀಡೆಗಳತ್ತ ಒಲವು ತೋರಲು ಆರಂಭಿಸಿದ್ದಾರೆ. ಇದೇ ಧ್ಯಾನ್‌ ಚಂದ್ ಅವರಿಗೆ ನಾವು ಸಲ್ಲಿಸಬಹುದಾದ ಬಹು ದೊಡ್ಡ ಗೌರವ’ ಎಂದರು.

‘ಕ್ರೀಡಾ ಚಟುವಟಿಕೆಗಳತ್ತ ಯುವ ಜನರು ಆಕರ್ಷಿತರಾಗಿದ್ದಾರೆ. ಈ ಬದಲಾವಣೆ, ಆದ್ಯತೆಗಳಿಗೆ ನೀರೆರೆದು, ಪೋಷಿಸಬೇಕು. ಗ್ರಾಮೀಣ ಮಟ್ಟದಲ್ಲಿಯೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಬೇಕು’ ಎಂದು ಪ‍್ರತಿಪಾದಿಸಿದರು.

‘ಯುವ ಪೀಳಿಗೆಯ ಮನೋಭಾವ ಬದಲಾಗಿದೆ. ಹೊಸ ಗುರಿಯೊಂದಿಗೆ ಹೆಜ್ಜೆ ಇಡುತ್ತಿರುವ ಯುವ ಸಮುದಾಯ ತಮ್ಮ ಗುರಿ ಸಾಧನೆಗೆ ಹೊಸ ದಾರಿಗಳನ್ನು ಅನ್ವೇಷಿಸುತ್ತಿದ್ದಾರೆ’ ಎಂದು ಹೇಳಿದರು.

ದೇಶದ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ಕೋರಿದ ಅವರು, ‘ನಮ್ಮ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಅವುಗಳ ಹಿಂದಿರುವ ವೈಜ್ಞಾನಿಕ ಅರ್ಥ– ಆಶಯವನ್ನು ತಿಳಿದುಕೊಳ್ಳಬೇಕು’ ಎಂದೂ ಹೇಳಿದರು.

‘ಮುಂಬರುವ ದಿನಗಳಲ್ಲಿ ವಿಶ್ವಕರ್ಮ ದಿನಾಚರಣೆ ಇದೆ. ಈ ದಿನ ವಿವಿಧ ಕೌಶಲಗಳಿಗೆ ಗೌರವ ಸಲ್ಲಿಸುವುದನ್ನು ಸೂಚಿಸುತ್ತದೆ’ ಎಂದರು.

‘ಒಲಿಂಪಿಕ್ಸ್‌ ಸಾಧನೆಯಿಂದ ಕ್ರೀಡೆಗೆ ಉತ್ತೇಜನ’
ಹಾಕಿ ಮಾಂತ್ರಿಕ ಧ್ಯಾನ್‌ ಚಂದ್‌ ಅವರ ಜನ್ಮದಿನದ ಸ್ಮರಣೆಗಾಗಿ ಪ್ರತಿ ವರ್ಷ ಆಗಸ್ಟ್‌ 29ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ. ಈ ಸಂದರ್ಭವನ್ನು, ಕ್ರೀಡಾ ಕ್ಷೇತ್ರದ ಸಾಧನೆ–ಕನಸುಗಳನ್ನು ಜನರ ಮುಂದಿಡಲು ಪ್ರಧಾನಿ ಮೋದಿ ಬಳಸಿಕೊಂಡರು.

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿನ ಸಾಧನೆಯಿಂದ ದೇಶದ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ಸಿಕ್ಕಿದೆ’ ಎಂದ ಅವರು, ‘ನಾಲ್ಕು ದಶಕಗಳ ನಂತರ ಹಾಕಿಯಲ್ಲಿ ಪುರುಷರ ತಂಡ ಪದಕ ಗೆದ್ದಿದೆ. ಇದರಿಂದ ಪ್ರೇರಣೆಗೊಂಡಿರುವ ಯುವಕರು ಕ್ರೀಡೆಗಳತ್ತ ಒಲವು ತೋರುತ್ತಿದ್ದಾರೆ. ಇದುವೇ ಧ್ಯಾನ್‌ ಚಂದ್ ಅವರಿಗೆ ನಾವು ಸಲ್ಲಿಸಬಹುದಾದ ಬಹು ದೊಡ್ಡ ಗೌರವ’ ಎಂದರು.

‘ಕ್ರೀಡಾ ಚಟುವಟಿಕೆಗಳತ್ತ ಯುವ ಜನರು ಆಕರ್ಷಿತರಾಗಿದ್ದಾರೆ. ಈ ಬದಲಾವಣೆ ಹಾಗೂ ಆದ್ಯತೆಗೆ ಎಷ್ಟು ಸಾಧ್ಯವೋ ಅಷ್ಟು ನಾವೆಲ್ಲರೂ ನೀರೆರೆದು ಪೋಷಿಸಬೇಕು. ಗ್ರಾಮೀಣ ಮಟ್ಟದಲ್ಲಿಯೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಬೇಕು. ಸರ್ವರ ಪ್ರಯತ್ನದಿಂದ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಸಾಧ್ಯ’ ಎಂದು ಪ‍್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT