ಅಲಹಾಬಾದ್: ಮದರಸಾದಂತಹ ಧಾರ್ಮಿಕ ಸಂಸ್ಥೆಗಳಿಗೆ ನೀಡುತ್ತಿರುವ ಧನಸಹಾಯದ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಇಂತಹ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡುವ ನೀತಿಯೂ ಸಂವಿಧಾನದ ಜಾತ್ಯತೀತ ತತ್ವಕ್ಕೆ ಅನುಗುಣವಾಗಿದೆಯೇ ಎಂದು ಉತ್ತರಿಸುವಂತೆ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮದರಸಾ ಅಂಜುಮಾನ್ ಇಸ್ಲಾಮಿಯಾ ಫೈಜುಲ್ ಉಲೂಮ್ ಮತ್ತು ಇನ್ನೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್ ಭಾನೋಟ್, ಈ ಬಗ್ಗೆ ನಾಲ್ಕು ವಾರಗಳೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದರು. ಮುಂದಿನ ವಿಚಾರಣೆಯ ದಿನಾಂಕವನ್ನು ಅಕ್ಟೋಬರ್ 6ಕ್ಕೆ ನಿಗದಿಪಡಿಸಿದರು.
ಮದರಸಾ ಸೇರಿದಂತೆ ಇತರ ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಆಟದ ಮೈದಾನ, ಪಠ್ಯಕ್ರಮ, ಕೋರ್ಸ್ ಹಾಗೂ ಮಾನ್ಯತೆ ನೀಡಲು ನಿಗದಿಪಡಿಸಿರುವ ಷರತ್ತು ಮತ್ತು ಮಾನದಂಡಗಳ ವಿವರಗಳನ್ನು ದಾಖಲೆಯಲ್ಲಿ ಸಲ್ಲಿಸಲು ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಮದರಸಾಗಳು ಹೆಣ್ಣುಮಕ್ಕಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಸಹಾಯ ಮಾಡುತ್ತಿವೆಯೇ ಎಂದು ಕೇಳಿರುವ ಕೋರ್ಟ್, ರಾಜ್ಯ ಸರ್ಕಾರವು ತನ್ನ ಪ್ರಮಾಣಪತ್ರದಲ್ಲಿ ಇತರ ಧಾರ್ಮಿಕ ಪಂಥಗಳ ಧಾರ್ಮಿಕ ಶಿಕ್ಷಣವನ್ನು ನೀಡುವ ಸಂಸ್ಥೆಗಳೊಂದಿಗೆ ಇತರ ಶಿಕ್ಷಣ ಮಂಡಳಿಗಳ ವಿವರಗಳನ್ನೂ ಸಲ್ಲಿಸುವಂತೆ ಸೂಚಿಸಿದೆ.
ಮದರಸಾ ಮಂಡಳಿಯಿಂದ ಮಾನ್ಯತೆ ಪಡೆದಿರುವ ಮದರಸಾಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಶಿಕ್ಷಕರ ಹುದ್ದೆಗಳನ್ನು ಸೃಷ್ಟಿಸುವಂತೆಯೂ ರಿಟ್ ಅರ್ಜಿಯಲ್ಲಿ ಕೋರಲಾಗಿದೆ.