ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್‌ಗಳು ರಾಜಕೀಯ ಪ್ರವೇಶಿಸದಂತೆ ಕ್ರಮ ಕೈಗೊಳ್ಳಿ: ನ್ಯಾಯಾಲಯ ಸೂಚನೆ

Last Updated 5 ಜುಲೈ 2022, 6:32 IST
ಅಕ್ಷರ ಗಾತ್ರ

ಲಖನೌ: ಕ್ರಿಮಿನಲ್‌ಗಳನ್ನು ರಾಜಕೀಯದಿಂದ ಹೊರದಬ್ಬಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಸಂಸತ್ತು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿದೆ. ಈ ಮೂಲಕ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ಮುರಿಯಬೇಕು ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರ ನೇತೃತ್ವದ ಪೀಠವು 23 ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ಬಿಎಸ್‌ಪಿ ಸಂಸದ ಅತುಲ್ ಕುಮಾರ್ ಸಿಂಗ್ (ಅತುಲ್ ರಾಯ್) ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ವೇಳೆ ಈ ರೀತಿ ಹೇಳಿತು.

ಪ್ರಜಾಪ್ರಭುತ್ವವನ್ನು ಉಳಿಸಲು, ಪ್ರಜಾಪ್ರಭುತ್ವದ ತತ್ವ ಮತ್ತು ಕಾನೂನಿನ ಆಧಾರದ ಮೇಲೆ ದೇಶ ನಡೆಯುವಂತೆ ಮಾಡಬೇಕಿದ್ದರೆ ಅಪರಾಧಿಗಳು ರಾಜಕೀಯ ಅಥವಾ ಶಾಸಕಾಂಗ ಪ್ರವೇಶಿಸುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಾದದ್ದು ಸಂಸತ್ತಿನ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿತು.

‘ರಾಯ್‌ ಅವರಿಗೆ ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ. ಅವರ ವಿರುದ್ಧದ 23 ಪ್ರಕರಣಗಳ ಕ್ರಿಮಿನಲ್ ಇತಿಹಾಸ, ಅವರ ಸಂಭಾವ್ಯತೆ, ಅವರ ವಿರುದ್ಧದ ಸಾಕ್ಷ್ಯಗಳು ಮತ್ತು ಸಾಕ್ಷ್ಯವನ್ನು ತಿರುಚುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್‌ ಈ ನಿರ್ಧಾರಕ್ಕೆ ಬಂದಿದೆ’ ಎಂದು ಪೀಠ ತಿಳಿಸಿತು.

ಕಳೆದ ವರ್ಷ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ ಹೊರಗೆ ಬಾಲಕಿ ಮತ್ತು ಸಾಕ್ಷಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಾಯ್‌ ವಿರುದ್ಧ ಲಖನೌನ ಹಜರತ್‌ಗಂಜ್ ಪೊಲೀಸರು ಪ್ರಕರಣ ದಾಖಲಿಸಿದ್ದರು.

‘2004ರಲ್ಲಿ ಲೋಕಸಭಾದ ಶೇ 24ರಷ್ಟು ಸಂಸದರು ಕ್ರಿಮಿನಲ್ ಮೊಕದ್ದಮೆಗಳನ್ನು ಬಾಕಿ ಉಳಿಸಿಕೊಂಡಿದ್ದರು. ಇದು 2009ರಲ್ಲಿ ಶೇ 30 ಕ್ಕೆ ಏರಿತು. 2014 ರಲ್ಲಿ ಇದು ಶೇ 34ಕ್ಕು, 2019ರಲ್ಲಿ ಶೇ 43ಕ್ಕೂ ಏರಿಕೆಯಾಗಿದೆ’ ಎಂದು ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್‌ ಹೇಳಿತು.

‘ರಾಜಕೀಯದ ಅಪರಾಧೀಕರಣ ಮತ್ತು ಚುನಾವಣಾ ಸುಧಾರಣೆಗಳ ಅಗತ್ಯಗಳ ಬಗ್ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ, ಭಾರತೀಯ ಪ್ರಜಾಪ್ರಭುತ್ವವನ್ನು ಅಪರಾಧಿಗಳು, ಕೊಲೆಗಡುಕರಿಂದ ರಕ್ಷಿಸಲು ಸಂಸತ್ತು ಮತ್ತು ಚುನಾವಣಾ ಆಯೋಗವು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿಲ್ಲ’ ಎಂದೂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

‘ವರ್ತಮಾನದ ರಾಜಕೀಯವು ಅಪರಾಧ, ಹಣಬಲ, ತೋಳ್ಬಲದ ಜಾಲದಲ್ಲಿ ಸಿಲುಕಿದೆ ಎಂಬುದು ನಿರ್ವಿವಾದ. ಅಪರಾಧ ಮತ್ತು ರಾಜಕೀಯದ ನಡುವಿನ ನಂಟು ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನು, ಆಡಳಿತಕ್ಕೆ ಎದುರಾಗಿರುವ ಗಂಭೀರ ಅಪಾಯ. ಸಂಸತ್ತು, ವಿಧಾನಸಭೆ, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ಗಳಿಗೆ ಸ್ಪರ್ಧಿಸುವುದು ಇಂದು ದುಬಾರಿ ಎನಿಸಿದೆ’ ಎಂದು ನ್ಯಾಯಾಲಯ ಹೇಳಿದೆ.

‘ಸಂಘಟಿತ ಅಪರಾಧ, ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳ ನಡುವೆ ಅಪವಿತ್ರ ಮೈತ್ರಿ ಇದೆ’ ಎಂದು ಕೋರ್ಟ್‌ ಹೇಳಿತು.

‘ಈ ವಿದ್ಯಮಾನಗಳು ಕಾನೂನು ಜಾರಿ ಸಂಸ್ಥೆಗಳ, ಸರ್ಕಾರದ ವಿಶ್ವಾಸಾರ್ಹತೆ, ಪರಿಣಾಮಕಾರಿತ್ವ ಮತ್ತು ನಿಷ್ಪಕ್ಷಪಾತ ತತ್ವವನ್ನು ಕುಗ್ಗಿಸಿದೆ’ ಎಂದು ನ್ಯಾಯಾಲಯ ಹೇಳಿದೆ.

‘ರಾಯ್ ಅವರಂತಹ ಆರೋಪಿಗಳು ತಮ್ಮ ಹಣಬಲ, ತೋಳ್ಬಲ ಮತ್ತು ರಾಜಕೀಯ ಶಕ್ತಿ ಬಳಸಿಕೊಂಡು ಸಾಕ್ಷಿಗಳನ್ನು ಮಣಿಸಿದ್ದಾರೆ. ತನಿಖೆಯ ಮೇಲೆ ಪ್ರಭಾವ ಬೀರಿದ್ದಾರೆ ಮತ್ತು ಸಾಕ್ಷ್ಯವನ್ನು ತಿರುಚಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.

‘ಇದು ದೇಶದ ಆಡಳಿತ ಮತ್ತು ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸದ ಕೊರತೆಗೆ ಕಾರಣವಾಗಿದೆ’ ಎಂದು ನ್ಯಾಯಾಲಯವು ಹೇಳಿತು.

‘ಅಪರಾಧ ಹಿನ್ನೆಲೆಯ ಮಂದಿ ಅಪಾಯಕಾರಿ ಪ್ರಮಾಣದಲ್ಲಿ ಸಂಸತ್ತು ಮತ್ತು ವಿಧಾನಸಭೆಯನ್ನು ಪ್ರವೇಶಿಸುತ್ತಿರುವುದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT