ನವದೆಹಲಿ: ಟಿಎಂಸಿ ಸಂಸದ ದಿನೇಶ್ ತ್ರಿವೇದಿ ಶುಕ್ರವಾರ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರಕಟಿಸಿದರು. ‘ಪಶ್ಚಿಮ ಬಂಗಾಳದಲ್ಲಿ ಹಿಂಸೆ ತಡೆಗೆ ಏನೂ ಮಾಡಲಾಗುತ್ತಿಲ್ಲ. ನನಗೆ ಇಲ್ಲಿ ಕುಳಿತುಕೊಳ್ಳಲು ಉಸಿರುಗಟ್ಟುವ ಅನುಭವವಾಗುತ್ತಿದೆ’ ಎಂದೂ ರಾಜೀನಾಮೆಗೆ ಕಾರಣ ನೀಡಿದರು.
‘ಹಿಂಸಾತ್ಮಕ ಘಟನೆಗಳನ್ನು ತಡೆಯಲು ಏನೂ ಮಾಡಲಾಗದೇ ಸದನದಲ್ಲಿ ಸುಮ್ಮನೆ ಕುಳಿತು ಕೊಳ್ಳುವುದಕ್ಕಿಂತಲೂ ರಾಜೀನಾಮೆ ನೀಡಿ, ರಾಜ್ಯದಲ್ಲಿ ಜನರ ಜೊತೆ ಸೇರುವುದೇ ಒಳಿತು‘ ಎಂದೂ ಹೇಳಿದರು.
ರಾಜ್ಯಸಭೆ ಪೀಠದಲ್ಲಿದ್ದ ಉಪ ಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಅವರು, ‘ರಾಜೀನಾಮೆ ಸಲ್ಲಿಸಲು ಕೆಲ ವಿಧಾನವಿದೆ. ನಿಯಮದಂತೆ ಲಿಖಿತವಾಗಿ ಸಭಾಪತಿ ಅವರಿಗೆ ರಾಜೀನಾಮೆ ಸಲ್ಲಿಸಬಹುದು’ ಎಂದು ಹೇಳಿದರು.
ತ್ರಿವೇದಿ ಕಳೆದ ಎರಡು ತಿಂಗಳಿಂದ ಪಕ್ಷದ ಜೊತೆಗೆ ಅಂತರ ಕಾಯ್ದುಕೊಂಡಿದ್ದರು. ತ್ರಿವೇದಿ ನಿರ್ಧಾರವನ್ನು ಟೀಕಿಸಿರುವ ಟಿಎಂಸಿ, ಅವರು ಪಕ್ಷ ಮತ್ತು ರಾಜ್ಯದ ಜನರ ವಿಶ್ವಾಸಕ್ಕೆ ವಂಚನೆ ಎಸಗಿದ್ದಾರೆ ಎಂದು ಹೇಳಿದೆ.
ಇನ್ನೊಂದೆಡೆ ರಾಜೀನಾಮೆ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದ್ದು, ‘ತ್ರಿವೇದಿ ಅವರನ್ನು ನಮ್ಮ ಪಕ್ಷ ಸೇರಲು ಸ್ವಾಗತಿಸುತ್ತೇವೆ. ಇದು, ರಾಜ್ಯದಲ್ಲಿ ಟಿಎಂಸಿ ಅಂತ್ಯವಾಗುತ್ತಿರುವ ಸೂಚನೆ’ ಎಂದು ಪ್ರತಿಕ್ರಿಯಿಸಿದೆ.
I am resigning from Rajya Sabha today. There is violence happening in my state. We cannot speak anything here: TMC Rajya Sabha MP Dinesh Trivedi pic.twitter.com/6xvEYtciwF