ಲಖಿಂಪುರ ಖೇರಿ: ಸಮಾಜವಾದಿ ಪಕ್ಷವು (ಎಸ್ಪಿ) ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ. 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಅಪರಾಧಿಯೊಬ್ಬನ ಜತೆ ಪಕ್ಷ ನಂಟು ಹೊಂದಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಲಖಿಂಪುರ ಖೇರಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದಕರ ಬಗ್ಗೆ ಎಸ್ಪಿಗೆ ಕನಿಕರವೇಕೆ? ದೇಶದ ಭದ್ರತೆ ವಿಚಾರದಲ್ಲಿ ಆಟವಾಡುತ್ತಿರುವವರನ್ನು ಜನ ಬೆಂಬಲಿಸಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಅಪರಾಧಿಗಳ ಪೈಕಿ ಒಬ್ಬ ಅಜಮಾಗಡ ಜಿಲ್ಲೆಯ ಸಂಜಾರ್ಪುರ ಪ್ರದೇಶದವ. 38 ಅಪರಾಧಿಗಳಿಗೆ ಮರಣದಂಡನೆ ನೀಡಿ ಅಹಮದಾಬಾದ್ ನ್ಯಾಯಾಲಯ ತೀರ್ಪು ನೀಡಿದೆ. ಇದು ಐತಿಹಾಸಿಕ ತೀರ್ಪು ಎಂದು ಯೋಗಿ ಹೇಳಿದ್ದಾರೆ.
ಒಬ್ಬ ಭಯೋತ್ಪಾದಕನ ತಂದೆಗೆ ಸಮಾಜವಾದಿ ಪಕ್ಷದ ಜತೆ ನಂಟಿದೆ. ಅವರು ಸಮಾಜವಾದಿ ಪಕ್ಷದ ಪರ ಚುನಾವಣಾ ಪ್ರಚಾರ ಅಭಿಯಾನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.