ನವದೆಹಲಿ: ಯುವ ಜನರಲ್ಲಿ ಅಂಗಾಂಗ ದಾನವನ್ನು ಉತ್ತೇಜಿಸುವುದಕ್ಕಾಗಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಂಸದರ ಖಾಸಗಿ ಮಸೂದೆಯೊಂದನ್ನು ಮಂಡಿಸುವುದಾಗಿ ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.
’ಮಾನವ ಅಂಗಾಂಗ ದಾನ ಮತ್ತು ಕಸಿ ಮಸೂದೆ –2020 (‘Donation and Transplantation of Human Organ Bill, 2020’) ಅನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಅಂಗಾಂಗ ದಾನ ಮಾಡುವವರ ಕೊರತೆ ಇದೆ. ಮಾತ್ರವಲ್ಲ., ಅಂಗಾಂಗಗಳ ಬೇಡಿಕೆ ಮತ್ತು ಪೂರಕೆಯಲ್ಲೂ ತುಂಬಾ ಅಂತರವಿದೆ. ಈಗ ಮಂಡಿಸಲಿರುವ ಮಸೂದೆಯು ಈ ಎಲ್ಲ ಕೊರತೆಗಳನ್ನು ನೀಗಿಸಲಿದ್ದು, ವ್ಯಕ್ತಿ ಸತ್ತ ನಂತರ ಅಂಗಾಗ ದಾನ ಮಾಡುವುದನ್ನು ಕಡ್ಡಾಯಗೊಳಿಸಲಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ಪ್ರತಿ ವರ್ಷ ಐದು ಲಕ್ಷ ವ್ಯಕ್ತಿಗಳು ಅಂಗಾಂಗ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ವರ್ಷ 2 ಲಕ್ಷ ಮೂತ್ರಪಿಂಡಗಳು, 50 ಸಾವಿರ ಹೃದಯಗಳು ಮತ್ತು 50 ಸಾವಿರ ಲಿವರ್ಗಳು ಕಸಿಗಾಗಿ ಬೇಕಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಟ್ವಿಟರ್ನಲ್ಲಿ#OrganDonationDay ಹ್ಯಾಷ್ಟ್ಯಾಗ್ ಮೂಲಕ ಟ್ವೀಟ್ ಮಾಡಿರುವ ವರುಣ್, ’ದೇಶದಲ್ಲಿರುವ ಎಲ್ಲ ಯುವ ನಾಗರಿಕರು ಅಂಗಾಂಗ ದಾನಕ್ಕೆ ಸ್ವಯಂ ಪ್ರೇರಿತವಾಗಿ ನೋಂದಣಿ ಮಾಡಿಸಿಕೊಳ್ಳುವುದನ್ನು ಉತ್ತೇಜಿಸಲು ಈ ಸಂಸದರ ಖಾಸಗಿ ಮಸೂದೆಯನ್ನು ಮಂಡಿಸುತ್ತಿದ್ದೇನೆ. ಇದರಿಂದ ಅಂಗಾಗ ಕೊರತೆಯಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿತಗೊಳಿಸಲು ಸಾಧ್ಯವಿದೆ’ ಎಂದು ಉಲ್ಲೇಖಿಸಿದ್ದಾರೆ.