ನವದೆಹಲಿ: ಹವಾಮಾನ ಬದಲಾವಣೆಯಿಂದ ಭಾರತದಲ್ಲಿ ದಿಢೀರನೆ ಬರ ಪರಿಸ್ಥಿತಿ ಎದುರಾಗಬಹುದು ಎಂದು ಗಾಂಧಿನಗರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸಂಶೋಧಕರು ಅಧ್ಯಯನ ನಡೆಸಿದ್ದಾರೆ.
ತಾಪಮಾನ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಬೆಳೆ ಉತ್ಪಾದನೆ ಕುಂಠಿತವಾಗಲಿದೆ ಮತ್ತು ನೀರಿನ ಬೇಡಿಕೆ ಹೆಚ್ಚಲಿದೆ. ಜತೆಗೆ, ಅಂತರ್ಜಲದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಅಪಾರ ಪ್ರಮಾಣದಲ್ಲಿ ಮಣ್ಣಿನ ತೇವಾಂಶ ಕಡಿಮೆಯಾಗುವ ಮೂಲಕ ದಿಢೀರನೆ ಬರ ಪರಿಸ್ಥಿತಿ ಸೃಷ್ಟಿಯಾಗಬಹುದು. ಸಾಂಪ್ರದಾಯಿಕವಾಗಿ ಎದುರಾಗುವ ಬರ ಪರಿಸ್ಥಿತಿಗೂ ಇದಕ್ಕೂ ವಿಭಿನ್ನವಾಗಿರಲಿದೆ. ದಿಢೀರನೆ ಎದುರಾಗುವ ಬರದಿಂದ ಎರಡು ಮೂರು ವಾರಗಳ ಕಾಲ ಪರಿಣಾಮ ಬೀರಲಿದೆ ಮತ್ತು ಬೆಳೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.
ಮಣ್ಣಿನ ತೇವಾಂಶ, ಹವಾಮಾನ ಇಲಾಖೆಯ ವರದಿಗಳ ವಿಶ್ಲೇಷಣೆಗಳು ಮತ್ತು ಹವಾಮಾನ ಮುನ್ಸೂಚನೆ ಆಧರಿಸಿ ಈ ಅಧ್ಯಯನವನ್ನು ಸಂಶೋಧಕರು ಕೈಗೊಂಡಿದ್ದರು.
1951ರಿಂದ 2016ರ ಅವಧಿಯಲ್ಲಿ 1979ರಲ್ಲಿ ಈ ರೀತಿಯ ದಿಢೀರ ಬರ ಪರಿಸ್ಥಿತಿ ಎದುರಾಗಿತ್ತು. ದೇಶದ ಶೇಕಡ 40ರಷ್ಟು ಭಾಗದ ಮೇಲೆ ಪರಿಣಾಮ ಬೀರಿತ್ತು ಎಂದು ಅಧ್ಯಯನ ವರದಿ ತಿಳಿಸಿದೆ.
21ನೇ ಶತಮಾನದ ಅಂತ್ಯಕ್ಕೆ 1979ರ ಪರಿಸ್ಥಿತಿ ಏಳು ಪಟ್ಟು ಹೆಚ್ಚಾಗಬಹುದು. ಜತೆಗೆ, ಒಣ ಹವೆ ಮತ್ತು ಬಿಸಿಲಿನ ಪ್ರಮಾಣವೂ ಹೆಚ್ಚಾಗಬಹುದು ಎಂದು ಉಲ್ಲೇಖಿಸಲಾಗಿದೆ.
‘ವಿಳಂಬವಾಗಿ ಮಾನ್ಸೂನ್ ಆರಂಭವಾಗುವುದರಿಂದ ದಿಢೀರನೆ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ’ ಎಂದು ಗಾಂಧಿನಗರ ಐಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಿಮಲ್ ಮಿಶ್ರಾ ವಿವರಿಸಿದ್ದಾರೆ.