ಹಲ್ದಿಯಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ವಿಧಾನಸಭಾ ಸ್ಥಾನಕ್ಕೆ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಟಿಎಂಸಿಯ ಮಾಜಿ ಮುಖಂಡ ಮತ್ತು ಸಚಿವರಾಗಿದ್ದ ಸುವೇಂದು ಅಧಿಕಾರಿ ಪ್ರತಿಸ್ಪರ್ಧಿಯಾಗಿದ್ದಾರೆ.
ಎರಡು ಕಿ.ಮೀ. ರೋಡ್ಶೋನಲ್ಲಿ ಭಾಗಿಯಾಗಿ, ಟಿಎಂಸಿ ಪಕ್ಷದ ಅಧ್ಯಕ್ಷ ಸುಬ್ರತಾ ಬಕ್ಷಿ ಅವರೊಂದಿಗೆ ಹಲ್ದಿಯಾ ಉಪವಿಭಾಗಾಧಿಕಾರಿ ಕಚೇರಿಗೆ ಬಂದ 'ದೀದಿ', ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ನಂದಿಗ್ರಾಮದ ಶಿವ ಮಂದಿರಕ್ಕೆ ಭೇಟಿ ನೀಡಿದ ಅವರು, ಪ್ರಾರ್ಥನೆ ಮಾಡಿದರು.
ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಸುವೇಂದು ಅಧಿಕಾರಿ ಎದುರು ಮಮತಾ ಸ್ಪರ್ಧಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಮಹತ್ವದ ಕಣವಾಗಿ ಏರ್ಪಟ್ಟಿದೆ.
ಇತ್ತೀಚೆಗೆ ಕೋಲ್ಕತ್ತದಲ್ಲಿ ಬಿಜೆಪಿ ರ್ಯಾಲಿಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಿಂದ ಸ್ಪರ್ಧಿಸುತ್ತಿರುವುದರ ಬಗ್ಗೆ ವ್ಯಂಗ್ಯವಾಡಿದ್ದರು. 'ದೀದಿ ಅವರ ಸ್ಕೂಟಿ ಭವಾನಿಪುರದಲ್ಲಿ ನಿಲ್ಲುವ ಬದಲು ನಂದಿಗ್ರಾಮದ ಕಡೆಗೆ ತಿರುವು ಪಡೆದುಕೊಂಡಿದೆ...' ಎಂದಿದ್ದರು.
2016ರಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದ ಮಮತಾ, ಸಾಧ್ಯವಾದರೆ ಈ ಬಾರಿ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಘೋಷಸಿದ್ದರು. ಆದರೆ, ಅಂತಿಮವಾಗಿ ನಂದಿಗ್ರಾಮ ಒಂದು ಕ್ಷೇತ್ರವನ್ನಷ್ಟೇ ಆಯ್ಕೆ ಮಾಡಿಕೊಂಡಿದ್ದಾರೆ.