ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರದ ಬಳಿಕ ಗೆಲ್ಲುವ ಸವಾಲು: ಸಚಿವರಾಗಿದ್ದ ರಾಜೀವ್‌ ಈಗ ಬಿಜೆಪಿ ಅಭ್ಯರ್ಥಿ

Last Updated 8 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ದೊಮ್ಜುರ್‌ (ಪಶ್ಚಿಮ ಬಂಗಾಳ): ಪಕ್ಷ ಬದಲಾದರೂ ತಾವು ಹಳೆಯ ಅದೇ ವ್ಯಕ್ತಿ ಎಂಬ ಸಂದೇಶವನ್ನು ಮತದಾರರಿಗೆ ತಲುಪಿಸಲು ಪಶ್ಚಿಮ ಬಂಗಾಳದ ಮಾಜಿ ಸಚಿವ ರಾಜೀವ್‌ ಬ್ಯಾನರ್ಜಿ ಇನ್ನಿಲ್ಲದ ಯತ್ನ ನಡೆಸುತ್ತಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ ಅವರು ದೊಮ್ಜುರ್‌ ಕ್ಷೇತ್ರದಿಂದ ಮೂರನೇ ಬಾರಿಗೆ ಪುನರಾಯ್ಕೆ ಬಯಸಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕಿಂತ ಯಾವ ವ್ಯಕ್ತಿಯೂ ದೊಡ್ಡವರಲ್ಲ ಎಂಬ ಸಂದೇಶವನ್ನು ಜನರಿಗೆ ಮನದಟ್ಟು ಮಾಡಲು ಟಿಎಂಸಿ ನಡೆಸುತ್ತಿರುವ ಯತ್ನ ರಾಜೀವ್‌ ಅವರಿಗೆ ದೊಡ್ಡ ತಲೆನೋವಾಗಿದೆ.

ದೊಮ್ಜುರ್‌ ಕ್ಷೇತ್ರವು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡನ್ನೂ ಹೊಂದಿದೆ. ಸಾಂಪ್ರದಾಯಿಕವಾಗಿ ಸಿಪಿಎಂ ಭದ್ರಕೋಟೆಯಾಗಿತ್ತು ಈ ಕ್ಷೇತ್ರ. 1977ರಿಂದ 2006ರವರೆಗೆ ಇಲ್ಲಿ ಸಿಪಿಎಂ ಸತತವಾಗಿ ಗೆದ್ದಿದೆ. 2011ರಲ್ಲಿ ಸಿಪಿಎಂನ ಮಹಾಂತ ಚಟರ್ಜಿ ಅವರನ್ನು ರಾಜೀವ್‌ ಅವರು 24 ಸಾವಿರ ಮತಗಳಿಂದ ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಒಂದು ಲಕ್ಷಕ್ಕೂ ಹೆಚ್ಚು ಮತಗಳು. ಚಲಾವಣೆಯಾದ ಮತಗಳಲ್ಲಿ ಶೇ 67ರಷ್ಟು ಅವರಿಗೆ ದೊರೆತಿತ್ತು.

ಇತ್ತೀಚೆಗೆ ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚುತ್ತಿದೆ. ಹಾಗಿದ್ದರೂ 2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಟಿಎಂಸಿಗೆ 55 ಸಾವಿರ ಮತಗಳ ಮುನ್ನಡೆ ಸಿಕ್ಕಿತ್ತು.

ಇಲ್ಲಿ ಅಲ್ಪಸಂಖ್ಯಾತರ ಮತ ಪ್ರಮಾಣ ಶೇ 35ರಿಂದ 40ರಷ್ಟಿದೆ. ಹಾಗಾಗಿ, ರಾಜೀವ್‌ ಅವರು ಅಲ್ಪಸಂಖ್ಯಾತರ ಮತ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಕ್ಷೇತ್ರಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ಭೇಟಿ ನೀಡಿದ ಹಲವೆಡೆ ಅವರಿಗೆ ಕಪ್ಪು ಬಾವುಟ ತೋರಲಾಗಿದೆ. ಹಾಗಿದ್ದರೂ ಮುಸ್ಲಿಮರ ಪ್ರಾಬಲ್ಯದ ಪ್ರದೇಶಗಳಿಗೆ ಅವರು ಭೇಟಿ ನೀಡುತ್ತಲೇ ಇದ್ದಾರೆ.

‘ಕೆಲವು ಕಡೆಗಳಲ್ಲಿ ಸಮಸ್ಯೆ ಸೃಷ್ಟಿಸಲು ಟಿಎಂಸಿ ಯತ್ನಿಸುತ್ತಿದೆ. ಶೇ ನೂರರಷ್ಟು ಮತ ಪಡೆಯುವುದು ಇದರ ಉದ್ದೇಶ. ಅಲ್ಪಸಂಖ್ಯಾತರಿಗೆ ನನ್ನ ಬಗ್ಗೆ ಗೊತ್ತು. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ತಾರತಮ್ಯ ಮಾಡುವುದಿಲ್ಲ ಎಂಬುದು ಅವರಿಗೆ ಅರಿವಿದೆ’ ಎಂದು ರಾಜೀವ್‌ ಹೇಳುತ್ತಾರೆ.

ಆದರೆ, ಟಿಎಂಸಿಯ ಕಾರ್ಯಕರ್ತರು ರಾಜೀವ್‌ ಅವರ ರಾಜಕೀಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುತ್ತಾರೆ. ಟಿಎಂಸಿ ಸರ್ಕಾರದಲ್ಲಿ ಸಚಿವರಾಗಿ ಎಲ್ಲ ಅಧಿಕಾರವನ್ನೂ ಅನುಭವಿಸಿ ಚುನಾವಣೆಗೆ ಮುನ್ನ ಪಕ್ಷ ಬಿಟ್ಟದ್ದು ಎಷ್ಟು ಸರಿ ಎಂದು ಕಾರ್ಯಕರ್ತರು ಕೇಳುತ್ತಾರೆ.

ಹೌರಾದ ಪ್ರಭಾವಿ ಮುಖಂಡ ಮತ್ತು ಸಚಿವ ಅರೂಪ್‌ ರಾಯ್‌ ಅವರ ನಿಕಟವರ್ತಿಕಲ್ಯಾಣ್‌ ಘೋಷ್‌ ಅವರು ಟಿಎಂಸಿಯಿಂದ ಕಣದಲ್ಲಿದ್ದಾರೆ.

‘ಮಮತಾ ಬ್ಯಾನರ್ಜಿ ಅವರ ಕೆಲಸಕ್ಕೆ ಜನರು ಮತ ನೀಡಿದ್ದರಿಂದ ಅವರು (ರಾಜೀವ್‌) ದಾಖಲೆ ಅಂತರದಿಂದ ಗೆದ್ದರು. ಈಗ, ಅವರು ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. 2006ರ ಚುನಾವಣೆಯಲ್ಲಿ ಅವರು ಸೋತಿದ್ದರು. ಹಾಗಿರುವಾಗ ಅವರಿಗೆ ವೈಯಕ್ತಿಕ ವರ್ಚಸ್ಸು ಎಲ್ಲಿದೆ’ ಎಂದು ಘೋಷ್‌ ಪ್ರಶ್ನಿಸುತ್ತಾರೆ.

ಕಾಂಗ್ರೆಸ್–ಐಎಸ್‌ಎಫ್‌–ಎಡರಂಗ ಮೈತ್ರಿಕೂಟದಿಂದ ಸಿಪಿಎಂನ ಉತ್ತಮ್‌ ಬೇರ ಸ್ಪರ್ಧಿಸುತ್ತಿದ್ದಾರೆ. ಟಿಎಂಸಿಯಿಂದ ಕ್ಷೇತ್ರವನ್ನು ಮತ್ತೆ ಕಸಿದುಕೊಳ್ಳುವ ಉತ್ಸಾಹದಲ್ಲಿ ಅವರು ಇದ್ದಾರೆ. ಏಪ್ರಿಲ್‌ 10ರಂದು ನಾಲ್ಕನೇ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ.

**
ಮಮತಾ ಬ್ಯಾನರ್ಜಿ ಆರಂಭಿಸಿರುವ ‘ಸ್ಥಳೀಯರು–ಹೊರಗಿನವರು’ ಚರ್ಚೆಯನ್ನು ಖಂಡಿಸುತ್ತೇವೆ. ಸೋಲು ಖಚಿತ ಎಂಬುದು ಅರಿವಾದ ಬಳಿಕ ಅವರು ಹತಾಶರಾಗಿ ಹೀಗೆ ಮಾಡುತ್ತಿದ್ದಾರೆ. ಬಿಜೆಪಿ ಪರವಾಗಿ ಬೀಸುತ್ತಿರುವ ಅಲೆ ಎಷ್ಟು ಜೋರಾಗಿದೆಯೆಂದರೆ, ಅದರಲ್ಲಿ ಟಿಎಂಸಿ ಕೊಚ್ಚಿ ಹೋಗಲಿದೆ.
-ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ

**
ಪಶ್ಚಿಮ ಬಂಗಾಳವು ಮಹಿಳೆಯರಿಗೆ ಏಕೆ ಸುರಕ್ಷಿತ ಅಲ್ಲ? ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಸಂಚಾರ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುವುದು. ಶಾಲೆಗಳಲ್ಲಿ ಹೆಣ್ಣು ಮಕ್ಕಳ ಸುತ್ತ ಸುಳಿದಾಡುವವರನ್ನು ನಿಯಂತ್ರಿಸಲು ಆ್ಯಂಟಿ ರೋಮಿಯೋ ದಳ ರೂಪಿಸಲಾಗುವುದು.
-ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

**
ನೀವು (ಚುನಾವಣಾ ಆಯೋಗ) ನನಗೆ ಹತ್ತು ನೋಟಿಸ್‌ ಬೇಕಿದ್ದರೂ ಕೊಡಿ. ನನ್ನ ಉತ್ತರ ಒಂದೇ ಆಗಿರುತ್ತದೆ. ಹಿಂದೂ, ಮುಸ್ಲಿಂ ಮತಗಳ ವಿಭಜನೆ ವಿರುದ್ಧ ಸದಾ ಮಾತಾಡುತ್ತೇನೆ. ಧರ್ಮದ ನೆಲೆಯಲ್ಲಿ ಮತ ವಿಭಜನೆಯನ್ನು ಯಾವಾಗಲೂ ವಿರೋಧಿಸುತ್ತೇನೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT