ನವದೆಹಲಿ: ಸೀತೆಯ ನೇಪಾಳ ಹಾಗೂ ರಾವಣನ ಲಂಕಾದಲ್ಲಿ ಪೆಟ್ರೋಲ್ ದರ ಏಕೆ ಅಗ್ಗವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ವಿಶ್ವಂಭರ ಪ್ರಸಾದ್ ನಿಶಾದ್ ಅವರು ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೆ ಮಾಡಿದರು.
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಪ್ರಶ್ನಿಸಿದ ವಿಶ್ವಂಭರ ಪ್ರಸಾದ್, ಪೆಟ್ರೋಲ್ ದರವು ಸೀತಾ ಮಾತೆಯ ನೇಪಾಳ ಹಾಗೂ ರಾವಣರ ಲಂಕಾದಲ್ಲಿ ಅಗ್ಗವಾಗಿದೆ. ಹಾಗಿದ್ದರೆ ರಾಮ ಜನ್ಮಭೂಮಿ ಭಾರತದಲ್ಲಿ ಯಾವಾಗ ಕಡಿಮೆ ಮಾಡುತ್ತೀರಿ? ಎಂದು ಕೇಳಿದರು.
ನೆರೆಯ ದೇಶಗಳೊಂದಿಗೆ ಇಂಧನ ಬೆಲೆಗಳನ್ನು ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹರಿದಾಡಿತ್ತಿರುವುದು ಸರ್ವೆ ಸಾಮಾನ್ಯವಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಬುಧವಾರದಂದು ಮಗದೊಮ್ಮೆ ಸಾರ್ವಾಕಾಲಿಕ ದಾಖಲೆಯನ್ನು ತಲುಪಿತ್ತು. ಪೆಟ್ರೋಲ್ಗೆ ಪ್ರತಿ ಲೀಟರ್ಗೆ 30 ಪೈಸೆ ಹಾಗೂ ಡೀಸೆಲ್ಗೆ ಪ್ರತಿ ಲೀಟರ್ಗೆ 25 ಪೈಸೆ ಏರಿಕೆಗೊಂಡಿದ್ದವು.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 90.53 ರೂ. ಹಾಗೂ ಡೀಸೆಲ್ ದರ ಪ್ರತಿ ಲೀಟರ್ಗೆ 82.40 ರೂ. ತಲುಪಿದೆ.
ಏತನ್ಮಧ್ಯೆ ಪ್ರತಿಕ್ರಿಯೆ ನೀಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಇಂಧನ ಬೆಲೆಗಳು ಅಂತರ ರಾಷ್ಟ್ರೀಯ ದರವನ್ನು ಆಧರಿಸಿ ನಿರ್ಧಾರವಾಗುತ್ತದೆ. ಹಾಗಿರುವಾಗ ಇಂಧನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ತಪ್ಪು ಎಂದು ಸಮರ್ಥಿಸಿಕೊಂಡರು.