ನವದೆಹಲಿ: ಭಾರತೀಯ ವಿದೇಶಾಂಗ ಸೇವೆಯಲ್ಲಿ ಬದಲಾವಣೆಯಾಗಿದೆ ಎಂದು ಯುರೋಪ್ನ ಅಧಿಕಾರಿಗಳು ಹೇಳಿದ್ದರು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್ ತಿರುಗೇಟು ನೀಡಿದ್ದಾರೆ.
'ಹೌದು, ಭಾರತೀಯ ವಿದೇಶಾಂಗ ಸೇವೆ ಬದಲಾಗಿದೆ. ವಿದೇಶಾಂಗ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ಮಾತ್ರ ಪಾಲಿಸುತ್ತಾರೆ. ಅವರು ಇತರರ ವಾದಗಳನ್ನು ವಿರೋಧಿಸುತ್ತಾರೆ. ಅದನ್ನು ಅಹಂಕಾರ ಎಂದು ಕರೆಯಲು ಸಾಧ್ಯವಿಲ್ಲ. ಅದಕ್ಕೆ ನಂಬಿಕೆ ಎನ್ನಲಾಗುತ್ತದೆ. ಮತ್ತು, ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ ಎನ್ನುವುದು ಇದನ್ನೇ' ಎಂದು ಅವರು ಹೇಳಿದ್ದಾರೆ.
ಲಂಡನ್ನಲ್ಲಿ ನಡೆದ ‘ಐಡಿಯಾಸ್ ಫಾರ್ ಇಂಡಿಯಾ ಕಾನ್ಕ್ಲೇವ್’ ಕಾರ್ಯಕ್ರಮದ ಸಂವಾದದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ‘ನಾನು ಯುರೋಪ್ನ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ, ಭಾರತೀಯ ವಿದೇಶಾಂಗ ಸೇವೆಯು ಸಂಪೂರ್ಣ ಬದಲಾಗಿದೆ ಮತ್ತು ಅಧಿಕಾರಿಗಳು ಏನನ್ನೂ ಕೇಳಿಸಿಕೊಳ್ಳುವುದಿಲ್ಲ. ಅವರು ಉದ್ಧಟರಾಗಿದ್ದಾರೆ ಎಂದು ಅವರು ಹೇಳಿದರು. ಅವರಿಗೆ ನೀಡಲಾದ ಆದೇಶಗಳನ್ನು ಮಾತ್ರವೇ ನಮಗೆ ತಿಳಿಸುತ್ತಾರೆ ಎಂದರು. ಈ ರೀತಿ ಮಾಡುವುದು ಸರಿಯಲ್ಲ’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.