ಬೆಂಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ ₹300 ಕೋಟಿ ಬಿಡುಗಡೆ ಮಾಡಿದ್ದು, ಇದನ್ನು 2019–20 ಸಾಲಿನ ಬಿಡುಗಡೆಗೆ ಬಾಕಿ ಇರುವ ₹300 ಕೋಟಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, 2021–22 ನೇ ಸಾಲಿಗೆ ₹2 ಕೋಟಿಗೆ ಕ್ರಿಯಾ ಯೋಜನೆ ತಯಾರಿಸಲು ಅನುಮತಿ ನೀಡಿದೆ ಎಂದರು.
2018–19 ನೇ ಸಾಲಿನ ಸಂಬಂಧಿಸಿದಂತೆ ಬಾಕಿ ಇರುವ ₹127.69 ಕೋಟಿಯನ್ನು ಬಿಡುಗಡೆಗೊಳಿಸಲು ಪ್ರಸಕ್ತ ಲಭ್ಯವಿರುವ ಅನುದಾನ ಪೂರ್ಣವಾಗಿ ವೆಚ್ಚವಾದ ನಂತರ ಪ್ರಸ್ತಾವನೆ ಸಲ್ಲಿಸಲು ಅವಕಾಶ ಇದೆ. ಯೋಜನಾ ಇಲಾಖೆ ಅನುದಾನವನ್ನು ಕ್ಷೇತ್ರವಾರು ಬಿಡುಗಡೆ ಮಾಡುವ ಬದಲಾಗಿ ಜಿಲ್ಲಾವಾರು ಬಿಡುಗಡೆ ಮಾಡಲು ಸರ್ಕಾರ ನಿರ್ಣಯಿಸಿದೆ ಎಂದರು.
ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಉಳಿಕೆಯಾದ ಅನುದಾನವನ್ನು ರಾಜ್ಯ ಮಟ್ಟದ ಕೇಂದ್ರೀಕೃತ ಬ್ಯಾಂಕ್ ಖಾತೆಗೆ ಜಮೆಗೊಳಿಸಲಾಗುತ್ತದೆ. ಶಾಸಕರು ಕಾಮಗಾರಿಗಳನ್ನು ನೀಡಿದ ನಂತರ ಅದು ತಡವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಹಾಗೂ ಶಾಸಕರ ಅನುದಾನ ಬಿಡುಗಡೆಗೆ ಯಾವುದೇ ಅಡೆತಡೆ ಆಗದಂತೆ ಮಾರ್ಗಸೂಚಿ ಹೊರಡಿಸಲು ಸೂಚಿಸಲಾಗುವುದು ಎಂದು ಹೇಳಿದರು.