ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗಲಭೆ: ಪೊಲೀಸರಿಗೆ ದೂರು ಕೊಟ್ಟ ಶಾಸಕ ಅಖಂಡ ಶ್ರೀನಿವಾಸಮೂರ್ತಿ

₹3 ಕೋಟಿಯಷ್ಟು ಹಾನಿ, ತಾಯಿ ನೆನಪಿಗಿದ್ದ ತಾಳಿಯೂ ಇಲ್ಲ
Last Updated 14 ಆಗಸ್ಟ್ 2020, 8:29 IST
ಅಕ್ಷರ ಗಾತ್ರ

ಬೆಂಗಳೂರು: ಗಲಭೆ ವೇಳೆ ತಮ್ಮ ಮನೆಗೆ ಬೆಂಕಿ ಇಟ್ಟು ಸುಟ್ಟಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಡಿ.ಜೆ.ಹಳ್ಳಿ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

ಮಧ್ಯಾಹ್ನ ಠಾಣೆಗೆ ಬಂದಿದ್ದ ಅವರು, ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರನ್ನು ಭೇಟಿಯಾಗಿ 25 ನಿಮಿಷ ಮಾತನಾಡಿದರು. ಅಂದು ನಡೆದ ಘಟನೆ ಬಗ್ಗೆ ವಿವರಿಸಿ, ಲಿಖಿತವಾಗಿ ದೂರು ನೀಡಿದರು.

ಗಲಭೆ ನಂತರ ಶಾಸಕರು ಠಾಣೆಗೆ ಬಂದು ನೋಡಿರಲಿಲ್ಲ. ಕೇವಲ‌ ತಮ್ಮ ಮನೆಯನ್ನಷ್ಟೇ ಸುಟ್ಟ ಸ್ಥಿತಿಯಲ್ಲಿ ನೋಡಿದ್ದರು. ಶುಕ್ರವಾರ ಮಧ್ಯಾಹ್ನ ಡಿ.ಜೆ.ಹಳ್ಳಿ ಠಾಣೆಗೆ ಬಂದಾಗ ವಾಹನಗಳು ಸುಟ್ಟ ಅವಶೇಷಗಳನ್ನು ನೋಡಿ ದಂಗಾದರು. ಮನೆಗಿಂತಲೂ ಠಾಣೆಯಲ್ಲೇ ಹೆಚ್ಚು ಹಾನಿಯಾಗಿದೆಯಲ್ಲ ಎಂದು ಬೆಂಬಲಿಗರ ಜೊತೆ ಮಾತನಾಡಿದರು.

ದೂರು ನೀಡಿ ಹೊರಬಂದ ಶ್ರೀನಿವಾಸಮೂರ್ತಿ, 'ನನ್ನ ತಂದೆ ಕಟ್ಟಿದ್ದ ಹಾಗೂ ನಾನು ಆಡಿ ಬೆಳೆದ ಮನೆ ಸುಟ್ಟು ಕರಕಲಾಗಿದೆ. ತಾಯಿ ನೆನಪಿಗೆ ಇದ್ದ ತಾಳಿಯೂ ಕಾಣಿಸುತ್ತಿಲ್ಲ' ಎಂದು ಭಾವುಕರಾದರು.

'ಅಂದಾಜು ₹3 ಕೋಟಿಯಷ್ಟು ಹಾನಿಯಾಗಿದೆ. ಇಡೀ ಮನೆಯನ್ನು ಕೆಡವಬೇಕು. ತಂದೆ-ತಾಯಿ ನಮ್ಮನ್ನು ಸಾಕಿದ ಮನೆಯನ್ನು ಈ ಸ್ಥಿತಿಯಲ್ಲಿ ನೋಡಿ ದುಃಖವಾಗುತ್ತಿದೆ' ಎಂದರು.

'ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಬೇಕು ಹಾಗೂ ಗಲಭೆ ಸೃಷ್ಟಿಸಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಪೊಲೀಸರಿಗೆ ದೂರು‌‌ ನೀಡಿದ್ದೇನೆ' ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT