ಬೆಂಗಳೂರು: ‘ಹಿಂದಿಪರ ನಿಲುವಿನಿಂದ ಹಿಂದೆ ಸರಿಯುವುದಿಲ್ಲ’ ಎಂದು ಘೋಷಿಸಿರುವಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರುಈ ಹಠದಿಂದ ಹಿಂದೆ ಸರಿಯಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
‘ಸಂವಿಧಾನದ ಪ್ರಕಾರ 23 ಭಾಷೆಗಳೂ ಸರಿಸಮಾನ ಎಂದು ಸರಿಯಾಗಿಯೇ ಹೇಳಿರುವ ದೊಡ್ಡರಂಗೇಗೌಡರು,‘ಸರಿಸಮಾನ ಭಾಷೆಗಳಲ್ಲಿ ಒಂದಾದ ಹಿಂದಿ ಹೇರಿಕೆಗೆ ನಡೆಯುತ್ತಾ ಬಂದ ಪ್ರಯತ್ನಗಳ ಇತಿಹಾಸ ಮರೆಯಬಾರದು. ಭಾಷೆ ಸಮಾನವಾಗದೆ, ಮೊದಲ ಸ್ಥಾನಕ್ಕೆ ಏರಿಸುವ ಹುನ್ನಾರಗಳನ್ನು ಖಂಡಿಸಬೇಕು’ ಎಂದಿದ್ದಾರೆ.
‘ಹಿಂದಿ ಕಲಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಸಾಮ್ರಾಜ್ಯಪತಿಯಾಗುವ ಪ್ರವೃತ್ತಿಯನ್ನು ವಿರೋಧಿಸಬೇಕು. ದೇಶದ ಇತರೆ ಭಾಷೆಗಳಿಗೆ ಇಲ್ಲದ ಸವಲತ್ತುಗಳು ಹಿಂದಿಗೆ ಇರುವುದನ್ನೂ ಪ್ರಶ್ನಿಸಿ, ಸಮಾನ ಸ್ಥಾನಕ್ಕೆ ತರಬೇಕು. ಹಾಗಾಗಿ, ದೊಡ್ಡರಂಗೇಗೌಡರು ಕೂಡಲೇ ಹಿಂದಿ ಹೇರಿಕೆ ಖಂಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಇವರು ಈ ಹಿಂದೆಯೂ ‘ಹಿಂದಿ ನಮ್ಮ ರಾಷ್ಟ್ರಭಾಷೆ’ ಎಂದು ಇಲ್ಲದ ಪಟ್ಟ ಕಟ್ಟಿದ್ದರು. ಸಂವಿಧಾನದ 343ನೇ ವಿಧಿಯ ಪ್ರಕಾರ ಹಿಂದಿಯು ಆಂಗ್ಲಭಾಷೆಯ ಜೊತೆಗಿನ ಕೇಂದ್ರ ಸರ್ಕಾರದ ಆಡಳಿತ ಭಾಷೆಯೇ ಹೊರತು, ರಾಷ್ಟ್ರ ಭಾಷೆಯಲ್ಲ. ಹಾಗಾಗಿ, ದೊಡ್ಡರಂಗೇಗೌಡರು ಮಾತನ್ನು ಹಿಂಪಡೆಯಬೇಕು. ತಪ್ಪನ್ನು ತಿದ್ದಿಕೊಳ್ಳುವುದು ಮತ್ತು ಸಕಾರಾತ್ಮಕವಾಗಿ ಅಭಿಪ್ರಾಯ ಬದಲಾಯಿಸಿಕೊಳ್ಳುವುದೂ ವ್ಯಕ್ತಿತ್ವ ವಿಕಾಸದ ಉತ್ತಮ ನಡೆ’ ಎಂದೂ ಅವರು ಹೇಳಿದ್ದಾರೆ.