ಬೆಂಗಳೂರು: ‘ಇಂಥದ್ದೇ ಖಾತೆ ಬೇಕು ಎಂದು ಹೇಳಲ್ಲ, ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಆದರೆ, ಅಬಕಾರಿ ಬೇಡ, ಬಡವರ ಪರವಾಗಿ ಕೆಲಸ ಮಾಡಲು ಅವಕಾಶ ಇರುವ ಖಾತೆ ಬಯಸುತ್ತೇನೆ’ ಎಂದು ನೂತನ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಕ್ಷ ವಿಶ್ವಾಸ ಇಟ್ಟು, ನಂಬಿಕೆ ಇಟ್ಟು ನನ್ನನ್ನು ಎರಡನೇ ಬಾರಿಗೆ ಸಚಿವನಾಗಿ ಮಾಡಿದೆ. ಜನಪರ ಆಡಳಿತ ನೀಡಲು ಪ್ರಯತ್ನ ಮಾಡುತ್ತೇನೆ’ ಎಂದರು.
‘ಇರುವುದರಲ್ಲಿ ಶೇ 70, 80ರಷ್ಟು ವಾಸ್ತು ಇರುವ ಕೊಠಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ’ ಎಂದೂ ಹೇಳಿದರು.