ಬೆಂಗಳೂರು: ಸರ್ಕಾರಿ ಕೋಟಾದ ಹಾಸಿಗೆ ಬ್ಲಾಕಿಂಗ್ ದಂಧೆ ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಸಿಸಿಬಿ ಪೊಲೀಸರು, ನಗರದ 16 ಆಸ್ಪತ್ರೆಗಳಲ್ಲಿ ಶನಿವಾರ ಶೋಧ ನಡೆಸಿದರು.
ವಾರ್ರೂಮ್ಗಳ ಮೂಲಕ ಬ್ಲಾಕ್ ಮಾಡಲಾಗಿದ್ದ ಹಾಸಿಗೆಗಳಲ್ಲಿ ಯಾರೆಲ್ಲ ಸೋಂಕಿತರು ದಾಖಲಾಗಿದ್ದರು. ಅವರ ಹಿನ್ನೆಲೆ ಹಾಗೂ ಅವರ ಆರೋಗ್ಯ ಸ್ಥಿತಿ ಬಗ್ಗೆ ಸಿಸಿಬಿ ಮಾಹಿತಿ ಕಲೆಹಾಕುತ್ತಿದೆ.
ಬ್ಲಾಕ್ ಮಾಡಿದ್ದ ಹಾಸಿಗೆಗಳಲ್ಲಿ ದಾಖಲಾಗಲು ಬಹುತೇಕರು, ಸಾವಿರಾರು ರೂಪಾಯಿ ಹಣ ನೀಡಿದ್ದಾರೆ. ಹಣವನ್ನು ಪಡೆದವರು ಯಾರು ಎಂಬುದನ್ನು ಸಿಸಿಬಿ ಪತ್ತೆ ಮಾಡುತ್ತಿದೆ.
‘ಹಾಸಿಗೆ ಬ್ಲಾಕಿಂಗ್ ಸಂಬಂಧ ಜಯನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಎರಡೂ ಪ್ರಕರಣಗಳಲ್ಲೂ ನಾಲ್ವರನ್ನು ಬಂಧಿಸಿ, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅದೇ ರೀತಿ ನಿತ್ಯವೂ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಶೋಧ ನಡೆಸಲಾಗುತ್ತಿದೆ. ರೋಗಿಗಳ ಪಟ್ಟಿಯನ್ನು ಸಂಗ್ರಹಿಸಿ, ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.
‘ಇದುವರೆಗೂ ನಗರದ 18 ಆಸ್ಪತ್ರೆಗಳ ಮಾಹಿತಿ ಸಂಗ್ರಹಿಸಲಾಗಿದೆ. ಇನ್ಸ್ಪೆಕ್ಟರ್ ನೇತೃತ್ವದ ತಂಡಗಳು ಮಾಹಿತಿ ಪರಿಶೀಲನೆ ನಡೆಸುತ್ತಿವೆ’ ಎಂದೂ ತಿಳಿಸಿವೆ.
ವಿಚಾರಣೆ ಮುಂದುವರಿಕೆ; ‘ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಎನ್ನಲಾದ ಬಾಬು ಸೇರಿದಂತೆ ಹಲವರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಬಾಬು ಸೋಂಕಿತರಾಗಿ ಆಸ್ಪತ್ರೆ ಸೇರಿದ್ದಾರೆ. ಇದೀಗ ಮತ್ತಷ್ಟು ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅವರಿಂದಲೂ ಲಿಖಿತ ಹೇಳಿಕೆ ಪಡೆಯಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.
‘ವಾರ್ರೂಮ್ ವೈದ್ಯರು, ಸಿಬ್ಬಂದಿ, 108 ಆಂಬುಲೆನ್ಸ್ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಎಲ್ಲ ಪಟ್ಟಿ ಸಿದ್ಧಪಡಿಸಲಾಗಿದೆ. ಎಲ್ಲರಿಂದಲೂ ಲಿಖಿತ ಹೇಳಿಕೆ ಪಡೆದು, ಪರಿಶೀಲನೆ ನಡೆಸಿ ಜಾಲದ ಪ್ರಮುಖ ಆರೋಪಿ ಯಾರು ಎಂಬುದನ್ನು ಪತ್ತೆ ಮಾಡಬೇಕಿದೆ’ ಎಂದೂ ಸಿಸಿಬಿ ಮೂಲಗಳು ತಿಳಿಸಿದೆ.