ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಜನರಿಗೆ ಸತ್ಯ ತಿಳಿಸಿ ಅರಿವು ಮೂಡಿಸಿ: ಸಿದ್ದರಾಮಯ್ಯ

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಸುದೀರ್ಘ ಪತ್ರ ಬರೆದ ಮಾಜಿ ಮುಖ್ಯಮಂತ್ರಿ
Last Updated 16 ಆಗಸ್ಟ್ 2021, 9:19 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಎನ್ನುವುದು ಸುಳ್ಳಿನ ಫ್ಯಾಕ್ಟರಿ ಆಗಿದ್ದು, ಅದು ಉತ್ಪಾದಿಸಿ ಹಂಚುತ್ತಿರುವ ಸುಳ್ಳುಗಳ ಕುರಿತು ಜನರಿಗೆ ಸತ್ಯ ಹೇಳುವ ಜೊತೆಗೆ ಅರಿವು ಮೂಡಿಸಬೇಕು’ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರಿಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

‘ರಚನಾತ್ಮಕ ಹೋರಾಟದ ಮೂಲಕ ಮನುಷ್ಯ ವಿರೋಧಿಯಾದ ಬಿಜೆಪಿಯ ಕ್ರೂರ ಹುನ್ನಾರಗಳನ್ನು ಬಯಲಿಗೆಳೆದು ಸೋಲಿಸುವುದೇ ಎಲ್ಲ ಸಮಸ್ಯೆಗಳಿಗೆ ಇರುವ ನಿಜವಾದ ಪರಿಹಾರ. ಹಾಗೆ, ಮಾಡಬೇಕೆಂದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಷಯಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳುವುದು ಮುಖ್ಯ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಅವರು ಸುದೀರ್ಘ ಪತ್ರ ಬರೆದು ಮನವಿ ಮಾಡಿದ್ದಾರೆ.

‘ನಾನು ಬರೆದಿರುವ ‘ಜನಪೀಡಕ ಸರ್ಕಾರ’, ‘ಐದು ಕಾಯ್ದೆಗಳು- ಅಸಂಖ್ಯಾತ ಸುಳ್ಳುಗಳು’ ಮತ್ತು ‘ಪೆಟ್ರೋಲ್, ಡೀಸೆಲ್ ನೂರು –ಜನರ ಬದುಕು ನುಚ್ಚು ನೂರು’ ಎಂಬ ಕಿರು ಪುಸ್ತಕಗಳನ್ನು ಓದಿಗಾಗಿ ಕಳಿಸುತ್ತಿದ್ದೇನೆ. ನೀವು ಇದರಲ್ಲಿರುವ ವಿಚಾರಗಳನ್ನು ಓದಿ, ಕಿರು ಪುಸ್ತಕಗಳ ಕೊರತೆಯಾದರೆ ಪಕ್ಷದ ಶಿಷ್ಟಾಚಾರದಂತೆ ಮುದ್ರಿಸಿಕೊಂಡು ಎಲ್ಲ ಬೂತು ಮಟ್ಟದ ಕಾರ್ಯಕರ್ತರೂ ಓದುವಂತೆ ಮಾಡಿ ಜನರನ್ನು ನಿಜದ ಬೆಳಕಿನ ಕಡೆಗೆ ಮುನ್ನಡೆಸಬೇಕು’ ಎಂದು ಪಕ್ಷದ ಜಿಲ್ಲಾಮಟ್ಟದ ನಾಯಕರಲ್ಲಿ ಅವರು ಕೋರಿದ್ದಾರೆ.

ಪತ್ರದಲ್ಲಿ ಏನಿದೆ?
‘ಎರಡು ವರ್ಷದ ಹಿಂದೆ ಸಾಧಾರಣ ಕುಟುಂಬವೊಂದು ಜೀವನ ನಡೆಸಲು ಸರಾಸರಿ ₹ 5 ಸಾವಿರವನ್ನು ವೆಚ್ಚ ಮಾಡುತ್ತಿದ್ದರೆ ಇಂದು ₹ 11 ಸಾವಿರ ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ. 25 ಕಿ.ಮೀ ದೂರದ ಹಳ್ಳಿಯಿಂದ ಪೇಟೆ,‌ ಪಟ್ಟಣಕ್ಕೆ ಬಂದು ಕೂಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಬೈಕಿಗೆ ದಿನಕ್ಕೊಂದು ಲೀಟರ್ ಪೆಟ್ರೋಲ್ ಹಾಕಿಸಿದರೆ ₹ 37 ಸಾವಿರದಿಂದ ₹ 40 ಸಾವಿರ ಒಂದು ವರ್ಷಕ್ಕೆ ಖರ್ಚಾಗುತ್ತದೆ. ಇದರಲ್ಲಿ ಕನಿಷ್ಠ ₹ 24 ಸಾವಿರ ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಗಳಿಗೆ ಕಟ್ಟುತ್ತಾನೆ. ಮನಮೋಹನ ಸಿಂಗ್ ಅವರ ಕಾಲದಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ ₹ 9.21 ಗಳಷ್ಟು ತೆರಿಗೆ ಇದ್ದರೆ ಈಗ ₹ 33 ಅನ್ನು ಕೇಂದ್ರ ವಸೂಲಿ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಜನರ ದುಡಿಮೆ ಇಲ್ಲ. ಜನ ಅತ್ಯಂತ ವೇಗವಾಗಿ ಬಡವರಾಗುತ್ತಿದ್ದಾರೆ’

‘ರಾಜ್ಯದ ಬಿಜೆಪಿ ಸರ್ಕಾರ ಕೋವಿಡ್‌ ರೋಗದಲ್ಲೂ, ಹೆಣಗಳ ವಿಚಾರದಲ್ಲೂ ಭ್ರಷ್ಟಾಚಾರ ಮಾಡಿತು. ಜನರು ಆಕ್ಸಿಜನ್, ವೆಂಟಿಲೇಟರ್, ಆಂಬ್ಯುಲೆನ್ಸ್, ಹಾಸಿಗೆ, ವೈದ್ಯರು ಹಾಗೂ ಅಗತ್ಯ ಔಷಧಗಳೂ ಇಲ್ಲದೆ ಅನಾಥರಾಗಿ ಮರಣ ಹೊಂದಿದರು. ಜನರ ಸಾವುಗಳು ಸಾವುಗಳಲ್ಲ. ಅವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದಕ್ಷತೆ, ನಿರ್ಲಕ್ಷ್ಯ, ಅದಮ್ಯ ಭ್ರಷ್ಟಾಚಾರಗಳಿಂದ ನಡೆದ ಕಗ್ಗೊಲೆಗಳು ಎನ್ನದೆ ವಿಧಿಯಿಲ್ಲ’.

‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ಆರ್ಥಿಕತೆ, ಒಕ್ಕೂಟ ತತ್ವ, ರಾಜ್ಯದ ಭಾಷೆ, ಸಂಸ್ಕೃತಿ, ರಾಜ್ಯದ ಅಧಿಕಾರ, ಸಂಪತ್ತುಗಳ ಮೇಲೆ ತೀವ್ರ ದಬ್ಬಾಳಿಕೆ ನಡೆಸುತ್ತಿದೆ. ನಮ್ಮ ರಾಜ್ಯದಿಂದ ಐಟಿಬಿಟಿ ಕ್ಷೇತ್ರಗಳನ್ನು ಹೊರತುಪಡಿಸಿಯೇ ಸುಮಾರು ₹ 2.5 ಲಕ್ಷ ಕೋಟಿ ವಿವಿಧ ತೆರಿಗೆ ಮತ್ತು ಸೆಸ್‍ಗಳ ಮೂಲದಿಂದ ಸಂಗ್ರಹಿಸುತ್ತಿದೆ. ಆದರೆ, ನಮಗೆ 2020ರಲ್ಲಿ ವಾಪಸ್ಸು ಬಂದಿದ್ದು ಕೇವಲ ₹ 38 ಸಾವಿರ ಕೋಟಿ ಮಾತ್ರ. ನಿಯಮ ಪ್ರಕಾರ ಶೇ 42ರಷ್ಟು ನಮಗೆ ಹಂಚಿಕೆ ಮಾಡಿದರೆ ಕನಿಷ್ಟ ಎಂದರೂ ₹ 1.10 ಲಕ್ಷ ಕೋಟಿ ಬರಬೇಕು. ಐಟಿ ಬಿಟಿಯ ಲೆಕ್ಕ ಹಾಕಿದರೆ ಇನ್ನಷ್ಟು ಹೆಚ್ಚು ಬರಬೇಕಾಗುತ್ತದೆ. ಕರ್ನಾಟಕವು ದಿನದಿಂದ ದಿನಕ್ಕೆ ಸಾಲಗಾರ ರಾಜ್ಯವಾಗುತ್ತಿದೆ. ನಾನು ಅಧಿಕಾರದಿಂದ ಇಳಿದಾಗ ರಾಜ್ಯದ ಸಾಲ (ಕಳೆದ 70 ವರ್ಷಗಳಿಂದ ಮಾಡಿದ್ದು) 2.42 ಲಕ್ಷ ಕೋಟಿಗಳಷ್ಟಿತ್ತು. ಈ ವರ್ಷದ ಅಂತ್ಯಕ್ಕೆ ಸರ್ಕಾರ ದಾಖಲೆಗಳ ಪ್ರಕಾರ ಸುಮಾರು ₹ 4.57 ಲಕ್ಷ ಕೋಟಿ’

‘ಮನಮೋಹನ ಸಿಂಗ್ ಅವರು ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ (2014 ರ ಮಾರ್ಚ್ 31ಕ್ಕೆ) ದೇಶದ ಸಾಲ 53.11 ಲಕ್ಷ ಕೋಟಿ ಇತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಈ ವರ್ಷದ ಕೊನೆಗೆ ₹ 135.87 ಲಕ್ಷ ಕೋಟಿ ಆಗುತ್ತದೆಂದು ಮೋದಿ ಸರ್ಕಾರವೆ ಮಂಡಿಸಿದ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ. ಅಂದರೆ, ಮೋದಿಯವರು 6 ವರ್ಷಗಳಲ್ಲಿ ಮಾಡಿದ ಸಾಲ ಬರೋಬ್ಬರಿ ₹ 82.76 ಲಕ್ಷ ಕೋಟಿ. ದೇಶ ₹ 100 ತೆರಿಗೆ ಸಂಗ್ರಹಿಸಿದರೆ ₹ 45 ಸಾಲ ತೀರಿಸಲು ಖರ್ಚು ಮಾಡುತ್ತಿದೆ’

‘ಮನಮೋಹನ ಸಿಂಗ್ ಅವರ ಕಾಲದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಬ್ಯಾರೆಲ್ ಒಂದಕ್ಕೆ 125-140 ಡಾಲರ್‌ಗಳಿಗೆ ಏರಿಕೆಯಾಗಿತ್ತು. ಅಲ್ಲಿ ಬೆಲೆ ಕಡಿಮೆ ಆಗುವವರೆಗೂ ಜನರ ಮೇಲೆ ತೆರಿಗೆ ಹೊರೆ ಹೊರಿಸಬಾರದೆಂಬ ಕಾರಣದಿಂದ ತೈಲ ಬಾಂಡುಗಳನ್ನು ಮನಮೋಹನ ಸಿಂಗ್‌ ಸರ್ಕಾರ ಖರೀದಿಸಿತ್ತು. ಈ ಬಾಂಡುಗಳ ಒಟ್ಟಾರೆ ಬೆಲೆ ₹ 1.31 ಲಕ್ಷ ಕೋಟಿ ಮಾತ್ರ. ಈ ಬಾಂಡುಗಳ ಬಾಕಿಯನ್ನು ಮೋದಿಯವರ ಸರ್ಕಾರ 2015ರಲ್ಲಿ ಕೇವಲ ₹ 3,500 ಕೋಟಿ ಮಾತ್ರ ತೀರಿಸಿದೆ. ಬಡ್ಡಿ ಮೊತ್ತವನ್ನು ವರ್ಷಕ್ಕೆ ₹ 9.5 ಸಾವಿರ ಕೋಟಿ ತೀರಿಸಿದೆ. ಒಟಾರೆ 2024 ರವರೆಗೆ ಮೋದಿಯವರ ಸರ್ಕಾರ ತೀರಿಸಬೇಕಾಗಿರುವುದು ಸುಮಾರು ₹ 90 ಸಾವಿರ ಕೋಟಿ ಮಾತ್ರ. 2024 ರಲ್ಲಿ ಆಯ್ಕೆಯಾಗುವ ಸರ್ಕಾರವು ಸುಮಾರು ₹90 ಸಾವಿರ ಕೋಟಿ ಪಾವತಿಸಬೇಕಿದೆ’

‘ಆದರೆ, ಮೋದಿಯವರ ನೇತೃತ್ವದ ಸರ್ಕಾರ ಜನರಿಂದ ಅಬಕಾರಿ ಸುಂಕದ ನೆಪದಲ್ಲಿ ಸಂಗ್ರಹಿಸಿರುವ ಮೊತ್ತ ಅಂದಾಜು ₹ 20 ಲಕ್ಷ ಕೋಟಿಗಳಷ್ಟಾಗುತ್ತದೆ. 2020ರಲ್ಲಿ ₹ 3.35 ಲಕ್ಷ ಕೋಟಿ ಸಂಗ್ರಹಿಸಿದೆ. ಆರು ವರ್ಷಗಳಲ್ಲಿ ಕರ್ನಾಟಕದಿಂದ ಸುಮಾರು ₹ 1.20 ಲಕ್ಷ ಕೋಟಿ ಪೆಟ್ರೋಲ್, ಡೀಸೆಲ್‍ಗಳ ಬಾಬತ್ತಿನಿಂದ ಸಂಗ್ರಹಿಸಿದೆ. ಈ ಎಲ್ಲ ವಿಚಾರಗಳನ್ನು ಬಚ್ಚಿಟ್ಟು ಕಾಂಗ್ರೆಸ್ ಪಕ್ಷದ ಮೇಲೆ, ನೆಹರೂ, ಮನಮೋಹನ್ ಸಿಂಗ್ ಅವರ ಕುರಿತು ಸುಳ್ಳುಗಳನ್ನು ಉತ್ಪಾದಿಸಿ ಹಂಚುವುದೇ ಬಿಜೆಪಿ ಕೆಲಸವಾಗಿದೆ’

‘ವಾಜಪೇಯಿಯವರ ಆಡಳಿತದ ಕಡೆಯ ವರ್ಷದಲ್ಲಿ ತೆರಿಗೆ ಸಂಗ್ರಹ, ದೇಶವು ನೂರು ರೂಪಾಯಿ ತೆರಿಗೆ ಸಂಗ್ರಹಿಸಿದರೆ, ಅದರಲ್ಲಿ ಜನರಿಂದ ₹ 72, ಕಾರ್ಪೊರೇಟ್ ಬಂಡವಾಳಿಗರಿಂದ ಕೇವಲ ₹ 28 ಸಂಗ್ರಹಿಸುತ್ತಿದ್ದರು. ಮನಮೋಹನಸಿಂಗ್‌ ಅಧಿಕಾರಕ್ಕೆ ಬಂದ ಮೇಲೆ ಈ ತೆರಿಗೆಯನ್ನು ಅತ್ಯಂತ ಮೌನವಾಗಿಯೆ ಬದಲಾಯಿಸಿದ್ದರು. 2010 ರ ವೇಳೆಗೆ ಜನರು ಕಟ್ಟುವ ತೆರಿಗೆ ₹ 72 ರೂಪಾಯಿನಿಂದ ₹ 58ಕ್ಕೆ ಇಳಿದಿತ್ತು. ಕಾರ್ಪೊರೇಟ್ ಬಂಡವಾಳಿಗರು ಕಟ್ಟುವ ತೆರಿಗೆ ₹ 28 ರಿಂದ ₹ 40 ಕ್ಕೆ ಏರಿಕೆಯಾಗಿತ್ತು. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಈಗ ಜನರಿಂದ ಮತ್ತೆ ₹ 75 ಸಂಗ್ರಹಿಸುತ್ತಿದ್ದಾರೆ. ಕಾರ್ಪೊರೇಟ್ ಬಂಡವಾಳಿಗರಿಂದ ಕೇವಲ ₹ 25 ಸಂಗ್ರಹಿಸುತ್ತಿದ್ದಾರೆ. ಇದನ್ನು ನೋಡಿದರೆ ಸಾಕು ಬಿಜೆಪಿಯವರು ಯಾರ ಪರ ಎಂದು ಅರ್ಥವಾಗುತ್ತದೆ’

‘ಕೇಂದ್ರ ಸರ್ಕಾರ ರಾಜ್ಯಗಳ ತೆರಿಗೆ ಅಧಿಕಾರಗಳನ್ನು ಕಿತ್ತುಕೊಂಡು ಗುಜರಾತ್‌ ಮುಂತಾದ ಉತ್ತರದ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುತ್ತಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ನಮ್ಮ ರಾಜ್ಯದಿಂದ ಆಯ್ಕೆಯಾದ 25 ಜನ ಸಂಸದರುಗಳಲ್ಲಿ ಒಬ್ಬರೂ ಸಹ ಪ್ರಶ್ನಿಸುತ್ತಿಲ್ಲ ರಾಜ್ಯದ ಮೇಲಿನ ಕೇಂದ್ರದ ದಮನವನ್ನು ಪ್ರತಿಭಟಿಸುತ್ತಿಲ್ಲ. ರಾಜ್ಯದ ಬಿಜೆಪಿ ಸರ್ಕಾರವೂ ಪ್ರಶ್ನಿಸುತ್ತಿಲ್ಲ. ಹೀಗಾಗಿ ಮೋದಿಯವರ ಸರ್ಕಾರ ದೇಶದಲ್ಲಿಯೆ ಅನೇಕ ವಿಚಾರಗಳಲ್ಲಿ ಮುಂದುವರೆದಿದ್ದ ಕರ್ನಾಟಕ ರಾಜ್ಯವನ್ನು ತುಳಿದು ನರಕಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ. ಈ ರೀತಿಯ ಅನೇಕ ಸತ್ಯಗಳನ್ನು ಅಧ್ಯಯನ ಮಾಡಿ ತಾವುಗಳು ಜನರಿಗೆ ತಿಳಿ ಹೇಳಿ ಅರಿವು ಉಂಟು ಮಾಡಬೇಕು. ಸುಳ್ಳಿನ ಕಾರ್ಖಾನೆಯಾದ ಬಿಜೆಪಿಯ ಎದುರು ಸತ್ಯದ ದೀಪವನ್ನು ಹಚ್ಚಿ, ದೇಶವನ್ನು ರಾಹು ಕೇತುಗಳಂತೆ ಆವರಿಸಿಕೊಂಡಿರುವ ಬಿಜೆಪಿಯನ್ನು ಸಂಪೂರ್ಣ ತೊಲಗಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT