ಬೆಳಗಾವಿ: ‘ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಕೇಳುವುದರೊಂದಿಗೆ ಬಿಜೆಪಿಯ ಶಕ್ತಿ ಕುಂದಿರುವುದು ಸಾಬೀತಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಜೆಡಿಎಸ್ ಬೆಂಬಲ ಕೇಳಿದ್ದಾರೆ. ಹಾಗಾದರೆ ಮುಳುಗುತ್ತಿರುವ ಹಡಗು ಯಾವುದು?’ ಎಂದರು.
‘ಬಿಜೆಪಿಯಲ್ಲಿ ಸ್ವಾಭಿಮಾನ, ಶಿಸ್ಸು ಇದ್ದರೆ ಬೆಳಗಾವಿಯಲ್ಲಿನ ಬೆಳವಣಿಗೆಗಳ ಬಗ್ಗೆ ಉತ್ತರ ಕೊಡಲಿ. ಬ್ಲಾಕ್ಮೇಲರ್ಗಳಿಗೆ ಹೆದರಿ ಸರ್ಕಾರ ನಡೆಸುತ್ತಿರುವುದು ನನಗಂತೂ ಸಂತೋಷ ತಂದಿದೆ’ ಎಂದು ಕುಟುಕಿದರು.
‘ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಗ್ಗೆ ರಮೇಶ ಜಾರಕಿಹೊಳಿ ಥೂ ಎಂದೆಲ್ಲಾ ಮಾತನಾಡಿರುವುದು ಬಿಜೆಪಿ ಸಂಸ್ಕೃತಿಯ ಪ್ರತಿಬಿಂಬ. ನನ್ನ ಪಕ್ಷದಲ್ಲಾಗಿದ್ದರೆ ಅಂಥವರನ್ನು ಒಂದು ಗಂಟೆಯೂ ಇಟ್ಟುಕೊಳ್ಳುತ್ತಿರಲಿಲ್ಲ‘ ಎಂದು ಹೇಳಿದರು.
ಬೆಂಬಲ ಕೇಳಿದರೆ ತಪ್ಪಿಲ್ಲ: ಕಾರಜೋಳ
ವಿಜಯಪುರ: ‘ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್ ಬೆಂಬಲ ಕೇಳಿರುವುದರಲ್ಲಿ ತಪ್ಪಿಲ್ಲ. ಜೆಡಿಎಸ್ನವರು ಕಾಂಗ್ರೆಸ್ ಅನ್ನು ಯಾವಾಗಲೂ ಲೈಕ್ ಮಾಡುವುದಿಲ್ಲ. ಜೆಡಿಎಸ್ನವರು ಬಿಜೆಪಿಯನ್ನು ಹೆಚ್ಚು ಪ್ರೀತಿ ಮಾಡುತ್ತಾರೆ’ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಮರ್ಥಿಸಿಕೊಂಡರು.
ಮಳವಳ್ಳಿ (ಮಂಡ್ಯ): ‘ಪಕ್ಷ ಸೂಚಿಸಿದರೆ ಮಂಡ್ಯದಲ್ಲಿ ಮತ್ತೆ ಸ್ಪರ್ಧಿಸುವೆ. ಜಿಲ್ಲೆಯ ಜನರ ಜೊತೆಗೆ ನಿರಂತರವಾಗಿ ಜತೆಗಿರುತ್ತೇನೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.