ಮಂಗಳೂರು: ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿ ಸಿದಂತೆ, ಆರೋಪಿ ಆದಿತ್ಯ ರಾವ್ಗೆ ಜಿಲ್ಲಾ 4ನೇ ಹೆಚ್ಚುವರಿ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ಸ್ಫೋಟಕ ವಸ್ತು ತಡೆ ಕಾಯ್ದೆ ಅಡಿ 5 ವರ್ಷ ಹಾಗೂ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ 20 ವರ್ಷ ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದೆ. ಎರಡೂ ಶಿಕ್ಷೆಗಳು ಏಕ ಕಾಲದಲ್ಲಿ ಜಾರಿಯಾಗಲಿವೆ.
ಘಟನೆ ಹಿನ್ನೆಲೆ: 2020ರ ಜನವರಿ 20ರಂದು ರಿಕ್ಷಾ ಒಂದರಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಆದಿತ್ಯ ರಾವ್, ಸ್ಫೋಟಕ ವಸ್ತು ತುಂಬಿದ್ದ ಬ್ಯಾಗ್ಅನ್ನು ನಿರ್ಗಮನ ದ್ವಾರ ಸಮೀಪದ ಟಿಕೆಟ್ ಕೌಂಟರ್ ಬಳಿಯ ಆಸನದ ಮೇಲಿಟ್ಟು ಪರಾರಿಯಾಗಿದ್ದ. ಸಿಸಿಟಿವಿ ಕ್ಯಾಮೆರಾದಲ್ಲಿ ಇದು ಸೆರೆಯಾಗಿತ್ತು.
ಇದಾಗಿ ಕೆಲವು ದಿನಗಳ ನಂತರ ಆದಿತ್ಯ ರಾವ್ ಬೆಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ಆತನನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ನಂತರ ಮಂಗಳೂರು ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ ಆದಿತ್ಯನನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿತ್ತು.
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ತಾನು ತಪ್ಪಿತಸ್ಥ ಎಂಬುದನ್ನು ಆದಿತ್ಯ ಒಪ್ಪಿಕೊಂಡಿದ್ದ.ಆದರೆ ಇದು ಗಂಭೀರ ಪ್ರಕರಣವಾಗಿದ್ದರಿಂದ ಅಪರಾಧ ಸಾಬೀತಾಗಲೇಬೇಕು ಎಂದು ನ್ಯಾಯಾಲಯ ಸೂಚಿಸಿದ್ದರಿಂದ ಕ್ರಮದಂತೆ ವಿಚಾರಣೆ ನಡೆದಿದೆ ಎಂದು ಸರ್ಕಾರದ ಪರ ವಕೀಲ ಹರೀಶ್ ಉದ್ಯಾವರ ತಿಳಿಸಿದರು.
ಆದಿತ್ಯ ರಾವ್ ವಿರುದ್ಧ 700 ಪುಟಗಳ ದೋಷಾರೋಪಣೆ ಪಟ್ಟಿಯನ್ನು ತನಿಖಾಧಿಕಾರಿಗಳು ಮಂಗಳೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆತನನ್ನು ತಪ್ಪಿತಸ್ಥ ಎಂದು ಘೋಷಿಸಿ, ಶಿಕ್ಷೆ ವಿಧಿಸಿದೆ.