ಬೀದರ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅಲ್ಲಿನ ಬಿದರಿ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಭಾಷೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಕಾರ್ಯಕ್ಕೆ ವಿಶೇಷ ಪರಿಣಿತ ಶಿಕ್ಷಕರನ್ನು ಗುರುತಿಸಿ, ಅವರಿಗೆ ತರಬೇತಿ ನೀಡಬೇಕು. 50 ಗಡಿ ಗ್ರಾಮಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅನೌಪಚಾರಿಕ ಶಿಕ್ಷಣ ನೀಡಲು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಗಡಿ ಭಾಗದ ಕಲಾವಿದರನ್ನು ಬಳಸಿಕೊಂಡು, ಲಾವಣಿ, ಬಯಲಾಟ, ನಾಟಕ, ಕಲೆ, ಹರಿಕಥೆ ಸೇರಿದಂತೆ ಗಡಿ ಭಾಗದ ವಿಶೇಷ ಕಲೆಗಳನ್ನು ಯುವಕರಿಗೆ ಕಲಿಸಬೇಕು ಎಂದು ತೀರ್ಮಾನಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಈ ಯೋಜನೆ ಕೈಗೊಳ್ಳಲು ಮೊದಲ ಹಂತದಲ್ಲಿ ₹ 20 ಲಕ್ಷ ಅನುದಾನ ನೀಡಲು ನಿರ್ಧರಿಸಲಾಯಿತು.