ಮಂಗಳೂರು: ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಐಷಾರಾಮಿ ಕಾರು ಮಾರಾಟ ಮಾಡಿದ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಹಿಂದೆ ಸಿಸಿಬಿಯಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಕಬ್ಬಾಳ್ ರಾಜ್ ಹಾಗೂ ನಾರ್ಕೊಟಿಕ್ಸ್ ಆಂಡ್ ಎಕನಾಮಿಕ್ಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ ಅಮಾನತುಗೊಂಡವರು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರಿನಲ್ಲಿರುವ ರಾಮಕೃಷ್ಣ ಹಾಗೂ ಚಿಕ್ಕಮಗಳೂರಿನಲ್ಲಿರುವ ಕಬ್ಬಾಳ್ರಾಜ್ ಅವರನ್ನು ಸಿಐಡಿ ತಂಡ ವಶಕ್ಕೆ ಪಡೆದಿದೆ. ಪ್ರಕರಣದಲ್ಲಿ ಇನ್ನಷ್ಟು ಹಿರಿಯ ಪೊಲೀಸ್ ಅಧಿಕಾರಿಗಳು ಅಮಾನತು ಆಗುವ ಸಾಧ್ಯತೆ ಇದೆ.
ಮತ್ತಷ್ಟು ವಂಚನೆ ಆರೋಪ: ಈ ಮಧ್ಯೆ ಕಬ್ಬಾಳ್ರಾಜ್ ವಿರುದ್ಧ ಮತ್ತಷ್ಟು ವಂಚನೆ ಆರೋಪಗಳು ಬಯಲಿಗೆ ಬಂದಿವೆ. ಮೂವರು ಉದ್ಯಮಿಗಳಿಂದ ಕೋಟ್ಯಂತರ ಹಣ ಸುಲಿಗೆ ಮಾಡಲಾಗಿದೆ ಎಂದು ಆರೋಪ ಇದೆ.
ಮುಂಬೈನಲ್ಲಿರುವ ಉದ್ಯಮಿಯ ಮಂಗಳೂರಿನ ಮನೆಯ ಮೇಲೆ ದಾಳಿ ಮಾಡಿದ ಕಬ್ಬಾಳರಾಜ್ ತಂಡ, ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಎಂದು ಆರೋಪಿಸಿತ್ತು. ಈ ಬಗ್ಗೆ ಎಫ್ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿತ್ತು. ಹೆದರಿದ ಉದ್ಯಮಿ ₹65 ಲಕ್ಷ ನೀಡಿದ್ದಾರೆ.
ಇದೇ ರೀತಿ ಇನ್ನೂ ಇಬ್ಬರು ಉದ್ಯಮಿಗಳಿಂದ ₹35 ಲಕ್ಷ ಹಾಗೂ ₹25 ಲಕ್ಷ ವಸೂಲಿ ಮಾಡಲಾಗಿದೆ. ನಗದನ್ನು ನೀಡಿಲ್ಲ. ಬ್ಯಾಂಕ್ ಮೂಲಕವೇ ಹಣ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ ಎಂದು ಉದ್ಯಮಿಯ ಸ್ನೇಹಿತರೊಬ್ಬರು ತಿಳಿಸಿದ್ದಾರೆ.