ಬೆಂಗಳೂರು: ‘ರಾತ್ರಿ ಕರ್ಫ್ಯೂ ಮಾಡಿದ್ದರೂ ನಿರೀಕ್ಷೆಯ ಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿಲ್ಲ. ಜನರ ಸಹಕಾರ ಮುಖ್ಯ. ಲಾಕ್ಡೌನ್ ಮಾಡದೇ ಉಳಿದೆಲ್ಲ ರೀತಿಯ ಬಿಗಿ ಕ್ರಮ ಕೈಗೊಂಡು ಕೋವಿಡ್ ಹರಡುವಿಕೆ ನಿಯಂತ್ರಿಸಲು ಯತ್ನಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘17 –18ರಂದು ಅಧಿಕಾರಿಗಳು, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
‘ಮುಷ್ಕರ ನಿರತ ಸಾರಿಗೆ ನೌಕರರು ಇನ್ನೂ ಒಂದು ತಿಂಗಳು ಹೋರಾಟ ನಡೆಸಿದರೂ ವೇತನ ಪರಿಷ್ಕರಣೆ ಮಾಡುವುದಿಲ್ಲ. ಕ್ರಮ ಕೈಗೊಳ್ಳುವ ಜತೆಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ’ ಎಂದರು.
‘ಸಾರಿಗೆ ನೌಕರರು ಯಾರದ್ದೋ ಮಾತು ಕೇಳಿಕೊಂಡು ಹಬ್ಬದ ಸಮಯದಲ್ಲಿ ಜನರಿಗೆ ತೊಂದರೆ ಕೊಟ್ಟಿರುವುದನ್ನು ಸಹಿಸಲಾಗದು. ಮಾತುಕತೆಯಾಡುವ ಪ್ರಸಂಗವೂ ಉಳಿದಿಲ್ಲ. ಎಷ್ಟು ದಿನ ಬೇಕಾದರೂ ಅವರು ಹೋರಾಟ ನಡೆಸಲಿ’ ಎಂದು ಎಚ್ಚರಿಸಿದರು.
ಸದ್ಯ ನಡೆಯಲಿರುವ ಎರಡು ವಿಧಾನಸಭಾ ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.