ಬೆಂಗಳೂರು: ಭ್ರಷ್ಟಾಚಾರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನ ಬಿಜೆಪಿ ಭ್ರಷ್ಟಾಚಾರಕ್ಕೆ ಒಪ್ಪಿಗೆ ಮುದ್ರೆ ಒತ್ತಿದಂತೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ರಾಜ್ಯದ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಹಿಂದಿನ ಅಬಕಾರಿ ಸಚಿವರು ಅಧಿಕಾರಿಗಳಿಗೆ ಹಣಕ್ಕೆ ಪೀಡಿಸುವುದನ್ನ ಇಂದಿನ ಸಚಿವರೂ ಮುಂದುವರೆಸಿ ಬಿಜೆಪಿಯ ಭ್ರಷ್ಟಾಚಾರದ ಪರಂಪರೆಗೆ ತಮ್ಮ ಕೊಡುಗೆನ್ನೂ ನೀಡಿದ್ದಾರೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.
‘ಅಬಕಾರಿ ಇಲಾಖೆಯ ಲಂಚವತಾರದ ಬಗ್ಗೆ ಹಿಂದೆಯೇ ಪತ್ರ ತಲುಪಿದ್ದರೂ ಸುಭಗನಂತೆ ಮಾತನಾಡುವ ಪ್ರಧಾನಿಯ ಮೌನ ಬಿಜೆಪಿ ಭ್ರಷ್ಟಾಚಾರಕ್ಕೆ ‘ಮೋದಿ ಒಪ್ಪಿಗೆ ಮುದ್ರೆ’ ಒತ್ತಿದಂತೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಸಚಿವರ ಭ್ರಷ್ಟಾಚಾರಕ್ಕೆ ಅಧಿಕಾರಿಗಳ ತಲೆದಂಡವೇಕೆ? ಆರೋಪವಿರುವುದು ಸಚಿವರ ವಿರುದ್ಧ, ಸಚಿವರನ್ನು ತನಿಖೆಗೆ ಒಳಪಡಿಸುವುದನ್ನ ಬಿಟ್ಟು ಅಧಿಕಾರಿಗಳನ್ನು ಅಮಾನತುಗೊಳಿಸಿ ಪ್ರಕರಣ ಮುಚ್ಚಿಹಾಕಿ ಸಚಿವರನ್ನು ಬಚಾವು ಮಾಡುವ ಈ ತಂತ್ರ ಸಾಕು. ಯಡಿಯೂರಪ್ಪ ಅವರೇ, ಕೂಡಲೇ ಈ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಿ, ಸತ್ಯಾಸತ್ಯತೆ ಹೊರಬರಲಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಅಬಕಾರಿ ಖಾತೆ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಜಿಲ್ಲೆಯ ಅಬಕಾರಿ ಇಲಾಖೆ ಕಾರ್ಯವನ್ನು ಶ್ಲಾಘಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಇಲಾಖೆಯ ಆಂತರಿಕ ಸಭೆಯಲ್ಲಿ ಸಚಿವರಿಗೆ ₹5 ಲಕ್ಷ ನೀಡುವಂತೆ ಸೂಚಿಸಲಾಗಿದೆ. ನಮ್ಮ ಮೇಲೆ ಒತ್ತಡ ಇರುವುದರಿಂದ ಹಣ ತಲುಪಿಸಬೇಕು' ಎಂದು ಮಹಿಳಾ ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಗಳಿಗೆ ಹೇಳುವ ಆಡಿಯೊ ವೈರಲ್ ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.