ಕೋವಿಡ್ 3ನೇ ಅಲೆ ಎದುರಿಸಲು ಪೌಷ್ಟಿಕ ಆಹಾರ ಕಡಿಮೆ ದರಗಳಲ್ಲಿ ನೀಡಿ: ಸಿದ್ದರಾಮಯ್ಯ

ಬೆಂಗಳೂರು: 'ಕೋವಿಡ್ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಜನರು ಹಸಿವಿನಿಂದ ನರಳದಂತೆ ನೋಡಿಕೊಳ್ಳಬೇಕು. ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಜನರಿಗೆ ಕೈಗೆಟುಕುವ ದರಗಳಲ್ಲಿ ನೀಡಬೇಕು. ಅಗತ್ಯ ಇರುವವರನ್ನು ಗುರುತಿಸಿ ಅವರಿಗೆ ಉಚಿತವಾಗಿ ಪೌಷ್ಟಿಕ ಆಹಾರ ಒದಗಿಸಬೇಕು' ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
'ಉತ್ತಮ ಆಹಾರವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಇದ್ದರೆ ಕೊರೊನಾದಂಥ ಮಾರಣಾಂತಿಕ ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸಬಹುದು. ಆರೋಗ್ಯ ವ್ಯವಸ್ಥೆಯನ್ನು ಸಿದ್ಧವಾಗಿಟ್ಟುಕೊಳ್ಳವ ಜೊತೆಯಲ್ಲೆ ಜನರ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುವ ಕ್ರಮಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯೋನ್ಮುಖರಾಗಬೇಕು" ಎಂದು ಅವರು ಆಗ್ರಹಿಸಿದ್ದಾರೆ.
'ಕೋವಿಡ್ನ ಮೊದಲ ಮತ್ತು ಎರಡನೆ ಅಲೆಗಳು ರಾಷ್ಟ್ರ ಮತ್ತು ರಾಜ್ಯದ ಜನರ ಮೇಲೆ ಮಾರಣಾಂತಿಕ ಪರಿಣಾಮಗಳನ್ನು ಬೀರಿವೆ. ದೇಶದಲ್ಲಿ ಸೂತಕದ ವಾತಾವರಣ ಮುಗಿಯುವ ಮೊದಲೆ, ವೈರಾಣು ಮತ್ತು ಸಾಂಕ್ರಾಮಿಕ ರೋಗಗಳ ತಜ್ಞರು ಹಾಗೂ ಆರೋಗ್ಯ ಕ್ಷೇತ್ರದ ಪರಿಣತರು ಮೂರನೆ ಅಲೆಯ ಕುರಿತು ಆತಂಕದ ಮಾತುಗಳನ್ನಾಡುತ್ತಿದ್ದಾರೆ. ಬರಲಿರುವ ಮೂರನೆ ಅಲೆ ಮಕ್ಕಳ ಮೇಲೆ ಹಾಗೂ ಮೊದಲ ಎರಡು ಅಲೆಗಳಲ್ಲಿ ಕೊರೊನಾದಿಂದ ಬಚಾವಾದವರ ಮೇಲೆ ದುಷ್ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆಯೆಂದು ಅಂದಾಜಿಸುತ್ತಿದ್ದಾರೆ'
ಕರ್ನಾಟಕದ ರಾಜ್ಯಪಾಲರಾಗಿ ತಾವರ್ಚಂದ್ ಗೆಹ್ಲೋಟ್ ನೇಮಕ
"ರಾಜ್ಯದ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಪೌಷ್ಟಿಕತೆಯು ಮಾರಣಾಂತಿಕವಾದ ಗಂಭೀರ ಸಮಸ್ಯೆಗಳಿಗೆ ಮಕ್ಕಳು ಮತ್ತು ಯುವಜನತೆಯನ್ನು ದೂಡುತ್ತಿದೆ. ಕೊರೊನಾ ನೆಪದಲ್ಲಿ ಅಂಗನವಾಡಿಗಳಲ್ಲಿ ನೀಡುತ್ತಿದ್ದ ಪೌಷ್ಟಿಕ ಆಹಾರ ಮತ್ತು ಶಾಲೆಗಳಲ್ಲಿ ತಯಾರಿಸುತ್ತಿದ್ದ ಬಿಸಿಯೂಟ ನಿಲ್ಲಿಸಿದ್ದರಿಂದ ಅಪೌಷ್ಟಿಕತೆ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ಮೂರು ನಾಲ್ಕು ತಿಂಗಳಿಗೊಮ್ಮೆ ಅಕ್ಕಿ ಮುಂತಾದ ಆಹಾರ ಪದಾರ್ಥಗಳನ್ನು ಮನೆಗಳಿಗೆ ನೀಡುತ್ತಿರುವುದರಿಂದ ಮಕ್ಕಳಿಗೆ ಸಿಗಬೇಕಾದ ಆಹಾರ ಸಮರ್ಪಕವಾಗಿ ಸಿಗುತ್ತಿಲ್ಲ' ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
'ರಾಜ್ಯದ ಮಕ್ಕಳು, ಮಹಿಳೆಯರು ಹಾಗೂ ಯುವಜನರಲ್ಲಿನ ಅಪೌಷ್ಟಿಕತೆಯ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ. ಒಕ್ಕೂಟ ಸರ್ಕಾರದ ಆರೋಗ್ಯ ಇಲಾಖೆಯ ವತಿಯಿಂದ ನಡೆಸಿರುವ ಸಮೀಕ್ಷೆ-5 (2019-20) ರ ಪ್ರಕಾರ ರಾಜ್ಯದಲ್ಲಿರುವ ನಿಗಧಿತ ಪ್ರಮಾಣಕ್ಕಿಂತ ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ 33ರಷ್ಟಿದೆ. ಶೇ 65.5 ರಷ್ಟು ಮಕ್ಕಳ ಹಿಮೊಗ್ಲೋಬಿನ್ ಪ್ರಮಾಣ 11 ಗ್ರಾಂ ಗಿಂತ ಕಡಿಮೆ ಇದೆ. ಇದು ಅತ್ಯಂತ ಗಾಬರಿ ಹುಟ್ಟಿಸುವ ಸಂಗತಿಯಾಗಿದೆ'.
ಮೇಕೆದಾಟು ಯೋಜನೆ ತಡೆಯಲು ಯಾರಿಂದಲೂ ಸಾಧ್ಯ ಇಲ್ಲ: ಬಿಎಸ್ವೈ
'ಅದೇ ರೀತಿ 1000 ಮಕ್ಕಳಲ್ಲಿ 25 ಮಕ್ಕಳು 5 ವರ್ಷ ತುಂಬುವ ಮೊದಲೆ ರಾಜ್ಯದಲ್ಲಿ ಮರಣ ಹೊಂದುತ್ತಿದ್ದಾರೆ. ಗ್ರಾಮೀಣ ಕರ್ನಾಟಕದಲ್ಲಿ 28 ಮಕ್ಕಳು ಮರಣ ಹೊಂದುತ್ತಿದ್ದಾರೆ. ಒಕ್ಕೂಟ ಸರ್ಕಾರದ ಸುಸ್ಥಿರ ಅಭಿವೃದ್ಧಿ ಗುರಿ 2020-21ರ ಸಮೀಕ್ಷೆಯ ಪ್ರಕಾರ ಈ ವಯಸ್ಸಿನ ಮಕ್ಕಳ ಮರಣ ಪ್ರಮಾಣವ ಶೇ 28 ರಷ್ಟಿದೆ. ಹೀಗಾಗಿ 2019-20ಕ್ಕೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಾಗಿದೆ.'
'ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ 40ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಯಾದಗಿರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ಧಾರವಾಡ ಮುಂತಾದ ಜಿಲ್ಲೆಗಳಿವೆ. ರಾಜ್ಯದ ಸರಾಸರಿ ಪ್ರಮಾಣ ಶೇ 32 ರಷ್ಟಿದೆ. ತೀವ್ರ ಅಪೌಷ್ಟಿಕತೆಯುಳ್ಳವರಲ್ಲಿ ಶೇ 25ರಷ್ಟು ಮಕ್ಕಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೆ ಇದ್ದಾರೆ ಎಂಬುದು ತೀವ್ರ ಕಳವಳದ ವಿಚಾರ. ಇಂಥ ಸ್ಥಿತಿ ಇರುವಾಗ ರಾಜ್ಯ ಸರ್ಕಾರವು ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಮರೋಪಾದಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದೂ ಅವರು ಮನವಿ ಮಾಡಿದ್ದಾರೆ.
ಅಪಘಾತವಾದ ಕಾರು ನನ್ನದೇ, ಅದರಲ್ಲಿ ನಾನಿರಲಿಲ್ಲ: ಡಿಸಿಎಂ ಸವದಿ ಪುತ್ರ ಚಿದಾನಂದ
''ಅಪೌಷ್ಟಿಕತೆಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು ಮತ್ತಿತರರನ್ನು ಸಮರ್ಪಕವಾಗಿ ಗುರುತಿಸಿ ಅವರ ಆರೋಗ್ಯವನ್ನು ಸುಧಾರಿಸುವ ಕೆಲಸವನ್ನು ಮಾಡಲೇಬೇಕಾಗಿದೆ. ಈಗಾಗಲೆ ನಮ್ಮ ಪಕ್ಷದ ಹಲವು ಶಾಸಕರು ಸಿದ್ಧ ಪೌಷ್ಟಿಕಾಂಶದ ಔಷಧಿ, ಆಹಾರ ವಿತರಿಸುತ್ತಿದ್ದಾರೆ. ಸರ್ಕಾರ ಕೇವಲ ಬಾಯಿಮಾತಿನ ಕೆಲಸಗಳನ್ನು ಬಿಟ್ಟು ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಮತ್ತು ಇತರೆ ವಯಸ್ಸಿನ ಜನರನ್ನು ಗುರುತಿಸಿ ಸಮರೋಪಾದಿಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ವಿತರಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.