ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪೀಡಿತರ ಪೈಕಿಮಂಗಳವಾರ 10,421 ಮಂದಿ ಗುಣಮುಖವಾಗಿದ್ದಾರೆ. ಈ ಮೂಲಕ ಈವರೆಗೆ ಗುಣಮುಖರಾದವರ ಸಂಖ್ಯೆ6.02 ಲಕ್ಷಕ್ಕೆ ತಲುಪಿದೆ.
ಹೊಸದಾಗಿ 8,191 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಸದ್ಯ 1,13,549 ಸಕ್ರಿಯ ಪ್ರಕರಣಗಳು ಇವೆ.
ಬೆಂಗಳೂರು ನಗರದಲ್ಲಿ 28 ಜನರು ಸೇರಿದಂತೆ ಮಂಗಳವಾರ ರಾಜ್ಯದಲ್ಲಿ 87 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಾವಿನ ಒಟ್ಟು ಸಂಖ್ಯೆ 10,123ಕ್ಕೆ ತಲುಪಿದೆ. ಸೋಂಕು ದೃಢಪಟ್ಟ ಪ್ರಕರಣಗಳಲ್ಲಿ ಮೃತಪಟ್ಟವರ ಶೇಕಡಾವಾರು ಪ್ರಮಾಣ 1.06ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ 3,336 ಹೊಸ ಪ್ರಕರಣಗಳು ದೃಢಪಟ್ಟಿದ್ದು, ರಾಜಧಾನಿಯಲ್ಲಿ ಸೋಂಕು ತಗುಲಿದವರ ಒಟ್ಟು ಸಂಖ್ಯೆ 2,88,831ಕ್ಕೆ ಏರಿಕೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ 416, ತುಮಕೂರು ಜಿಲ್ಲೆಯಲ್ಲಿ 391 ಬೆಳಗಾವಿ ಜಿಲ್ಲೆಯಲ್ಲಿ 358, ದಕ್ಷಿಣ ಕನ್ನಡದಲ್ಲಿ 314 ಹೊಸ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಒಟ್ಟು 919 ಮಂದಿ ಕೋವಿಡ್ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಬೆಂಗಳೂರು ನಗರದಲ್ಲೇ 346 ಜನರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.