ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪೀಡಿತರ ಜತೆಗೆ ಸೋಂಕಿಗೆ ಗಂಭೀರವಾಗಿ ಅಸ್ವಸ್ಥಗೊಂಡು, ಸಾವಿಗೀಡಾಗುವವರ ಸಂಖ್ಯೆ ಸಹ ಏರಿಕೆ ಕಂಡಿದೆ. ಶುಕ್ರವಾರ ಬೆಂಗಳೂರಿನಲ್ಲಿ 57 ಮಂದಿ ಸೇರಿದಂತೆ ರಾಜ್ಯದಲ್ಲಿ 78 ಮಂದಿ ಕೋವಿಡ್ಗೆ ಮೃತಪಟ್ಟಿರುವುದು ದೃಢಪಟ್ಟಿದೆ.
ಕಳೆದ ಆರು ತಿಂಗಳ ಬಳಿಕ ವರದಿಯಾದ ಗರಿಷ್ಠ ಮರಣ ಪ್ರಕರಣಗಳು ಇವಾಗಿವೆ. ಸದ್ಯ ಮರಣ ಪ್ರಮಾಣ ದರ ಶೇ 0.52ರಷ್ಟಿದೆ. ಈ ತಿಂಗಳಲ್ಲಿಯೇ 623 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಈವರೆಗೆ ಸೋಂಕಿಗೆ ಮೃತಪಟ್ಟವರ ಸಂಖ್ಯೆ 13,190ಕ್ಕೆ ಏರಿಕೆಯಾಗಿದೆ. 24 ಗಂಟೆಯ ಅವಧಿಯಲ್ಲಿ ಮತ್ತೆ 14,859 ಮಂದಿ ಸೋಂಕಿತರಾಗಿದ್ದಾರೆ. ಕೇವಲ ಎರಡು ದಿನಗಳಲ್ಲಿ 29,597 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.07 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ ಕೋವಿಡ್ ಪೀಡಿತರಾದವರ ಸಂಖ್ಯೆ 11.24 ಲಕ್ಷ ದಾಟಿದೆ.
ಬೆಂಗಳೂರಿನಲ್ಲಿ 9,917 ಮಂದಿ ಕೋವಿಡ್ ಪೀಡಿತರಾಗಿದ್ದಾರೆ.ಅದೇ ರೀತಿ, ಕಲಬುರ್ಗಿ (488), ತುಮಕೂರು (432), ಮೈಸೂರು (415), ಬೀದರ್ (326), ಬಳ್ಳಾರಿ (279), ದಕ್ಷಿಣ ಕನ್ನಡ (256), ಹಾಸನ (244), ವಿಜಯಪುರ (207) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಶೇ 11.11ಕ್ಕೆ ತಲುಪಿದೆ.
ಸೋಂಕಿತರಲ್ಲಿ ಮೈಸೂರಿನಲ್ಲಿ ಐವರು, ಕಲಬುರ್ಗಿಯಲ್ಲಿ ಮೂರು ಮಂದಿ, ಬೀದರ್ ಮತ್ತು ತುಮಕೂರಿನಲ್ಲಿ ತಲಾ ಇಬ್ಬರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಹಾಗೂ ಯಾದಗಿರಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಶುಕ್ರವಾರ ದೃಢಪಟ್ಟ ಮರಣ ಪ್ರಕರಣಗಳಲ್ಲಿ 53 ಮಂದಿ ಖಾಸಗಿ ಆಸ್ಪತ್ರೆಯಲ್ಲಿಯೇ ಸಾವಿಗೀಡಾಗಿದ್ದಾರೆ.
ಒಂದು ದಿನದಲ್ಲಿ 1.33 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ತೀವ್ರ ನಿಗಾ ಘಟಕಕ್ಕೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದ್ದು, ಸದ್ಯ 577 ಮಂದಿ ಐಸಿಯುನಲ್ಲಿ ಇದ್ದಾರೆ. ಕೋವಿಡ್ ಪೀಡಿತರಲ್ಲಿ 4,031 ಮಂದಿ ಚೇತರಿಸಿಕೊಂಡಿದ್ದಾರೆ.
ಈವರೆಗೆ ಗುಣಮುಖರಾದವರ ಸಂಖ್ಯೆ 10.03 ಲಕ್ಷಕ್ಕೆ ಏರಿದೆ. ರಾಜ್ಯದಲ್ಲಿ ಶುಕ್ರವಾರ 4,061 ಕೇಂದ್ರ
ಗಳಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ. ಈವರೆಗೆ 64.01 ಲಕ್ಷ ಡೋಸ್ ಲಸಿಕೆ
ಯನ್ನು ನೀಡಲಾಗಿದೆ.
Karnataka reports 14,859 new COVID19 positive cases, 4,031 discharges and 78 deaths.
— ANI (@ANI) April 16, 2021
Total positive cases: 11,24,509
Total discharges: 10,03,985
Death toll: 13,190
Active cases: 1,07,315 pic.twitter.com/l6D6Bl8lLm
ಈ ಮಧ್ಯೆ, ಗುಂಪು ಸೇರುವ ಕಾರ್ಯಕ್ರಮಗಳಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಮಿತಿ ಹೇರಿ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.