ಸಿದ್ದಾಪುರ (ಕೊಡಗು ಜಿಲ್ಲೆ): ಅಮ್ಮತ್ತಿ ಹೊಸಕೋಟೆ ವ್ಯಾಪ್ತಿಯ ಕಾಫಿ ತೋಟದಲ್ಲಿ ದಾಂದಲೆ ನಡೆಸುತ್ತಿದ್ದ ಕಾಡಾನೆಯೊಂದನ್ನು ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಈ ಆನೆ ಜನರ ಮೇಲೂ ದಾಳಿ ನಡೆಸುತ್ತಿತ್ತು. ಗ್ರಾಮಸ್ಥರು ದೂರು ನೀಡಿದ್ದರು.
ಇಲಾಖೆಯ 60 ಸಿಬ್ಬಂದಿ, ‘ಅಭಿಮನ್ಯು’, ‘ಅರ್ಜುನ’, ‘ಗೋಪಾಲಕೃಷ್ಣ’, ‘ಗಣೇಶ’, ‘ಗಜೇಂದ್ರ’, ‘ಭೀಮ’ ಎಂಬ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.
ಹೊಸಕೋಟೆಯ ಕೊಕ್ಕಂಡಕಾಡು ಎಂಬಲ್ಲಿ ಪತ್ತೆಯಾದ ಪುಂಡಾನೆಯ ಮೇಲೆ, ವೈದ್ಯ ಮುಜೀಬ್ ಹಾಗೂ ಶೂಟರ್ ವಿಕ್ರಂ ಅವರು ಅರಿವಳಿಕೆ ಚುಚ್ಚುಮದ್ದು ಹಾರಿಸಿದರು. ಬಳಿಕ, ಸಾಕಾನೆಗಳ ಸಹಾಯದಿಂದ ಹಗ್ಗದಲ್ಲಿ ಬಂಧಿಸಲಾಯಿತು. ಸಾಕಾನೆಗಳು ಎಳೆದು ತರುವ ಸಂದರ್ಭದಲ್ಲಿ ಪುಂಡಾನೆಯು ತಪ್ಪಿಸಿಕೊಳ್ಳಲು ಯತ್ನಿಸುತ್ತಿತ್ತು. ಬಳಿಕ ಅಭಿಮನ್ಯು ಆನೆಯು, ಅದನ್ನು ಲಾರಿ ಹತ್ತಿಸುವಲ್ಲಿ ಯಶಸ್ವಿಯಾಯಿತು. ಸೆರೆಯಾದ ಆನೆಯು ಅಂದಾಜು 32 ವರ್ಷ ಪ್ರಾಯದ್ದಾಗಿದ್ದು, ಬಂಡೀಪುರಕ್ಕೆ ಕರೆದೊಯ್ಯಲಾಯಿತು.
ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಡಿಸಿಎಫ್ ಚಕ್ರಪಾಣಿ, ಎಸಿಎಫ್ ಉತ್ತಪ್ಪ, ರೋಶಿನಿ, ಆರ್ಎಫ್ಒ ಗೋಪಾಲ, ದೇವಯ್ಯ, ಉಪ ವಲಯ ಅರಣ್ಯ ಅಧಿಕಾರಿ ಅಶೋಕ, ಕಳ್ಳೀರ ದೇವಯ್ಯ, ಅರಣ್ಯ ಸಿಬ್ಬಂದಿ ಹಾಜರಿದ್ದರು.