ಮಂಡ್ಯ: ಚಾಮರಾಜನಗರದ ಘಟನೆಯನ್ನು ಮರೆಮಾಚಲು ಬಿಜೆಪಿ ನಾಯಕರು ಬೆಡ್ ಬ್ಲಾಕಿಂಗ್ ದಂಧೆಯ ನಾಟಕವಾಡುತ್ತಿದ್ದಾರೆ. ವಾಸ್ತವಾಂಶ ಮುಚ್ಚಿಟ್ಟು ಒಂದು ಸಮುದಾಯದವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
‘ಬೆಂಗಳೂರಿನ ಸಂಸದ, ಶಾಸಕರು ಒಂದು ವಾರ್ ರೂಂಗೆ ತೆರಳಿ ಬಲುದೊಡ್ಡ ದಂಧೆ ಬಯಲಿಗೆಳೆದಿರುವುದಾಗಿ ಹೇಳಿಕೊಂಡಿದ್ದಾರೆ. ಅಮಾಯಕ ಜನರು ಸಾಯುತ್ತಿರುವಾಗ ಸಮುದಾಯವೊಂದಕ್ಕೆ ಸೇರಿದವರ ಹೆಸರು ಓದಿ ಮದರಸಾ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಜನರಿಗೆ ಸತ್ಯ ಹೇಳುವುದನ್ನು ಬಿಟ್ಟು ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಚಾಮರಾಜನಗರ ಘಟನೆಯಲ್ಲಿ ಸರ್ಕಾರದ ತಪ್ಪಿದೆ, ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. 4 ಸಾವಿರ ಹಾಸಿಗೆಯನ್ನು ಅಕ್ರಮವಾಗಿ ಕಾಯ್ದಿರಿಸಲಾಗಿದೆ ಎಂದು ಹೇಳಿ ಜನರಲ್ಲಿ ಭಯ ಸೃಷ್ಟಿಸುತ್ತಿದ್ದಾರೆ. ಇಂದಿಗೂ ಬೆಂಗಳೂರಿನಲ್ಲಿ ಹಾಸಿಗೆ ಸಮಸ್ಯೆ ಇದೆ, ಹಾಗಿದ್ದರೆ ನೀವು ದಾಳಿ ಮಾಡಿ ಸಾಧಿಸಿದ್ದೇನು’ ಎಂದು ಪ್ರಶ್ನಿಸಿದರು.
‘ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಆದರೆ ತನಿಖೆಯ ಬಗ್ಗೆ ಯಾರಿಗೂ ನಂಬಿಕೆ ಇಲ್ಲ. ಡ್ರಗ್ಸ್ ಪ್ರಕರಣದ ತನಿಖೆ ಏನಾಯಿತು? ಒಂದಿಬ್ಬರು ಹೆಣ್ಣು ಮಕ್ಕಳನ್ನು ಬಂಧಿಸಿದ್ದು ಬಿಟ್ಟರೆ ಇನ್ನಾವ ಸಾಧನೆಯನ್ನೂ ಮಾಡಲಿಲ್ಲ. ಸಿ.ಡಿ ಪ್ರಕರಣವೂ ಮುಚ್ಚಿ ಹೋಯಿತು. ಈ ಪ್ರಕರಣವನ್ನೂ ಸಿಸಿಬಿಗೆ ಕೊಟ್ಟು ವಾರ್ ರೂಂ ಮೇಲೆ ದಾಳಿ ಮಾಡಿದರೆ ಮುಂದೆ ಕೆಲಸ ಮಾಡುವವರು ಯಾರು, ಹಾಸಿಗೆ ಹಂಚಿಕೆ ಮಾಡುವವರು ಯಾರು‘ ಎಂದು ಪ್ರಶ್ನಿಸಿದರು.
‘ಪ್ರಕರಣ ಸಂಬಂಧ ಬಂಧಿತಳಾಗಿರುವ ಮಹಿಳೆ ಎನ್ಜಿಒ ನಡೆಸುತ್ತಿದ್ದರು ಎಂಬ ಮಾಹಿತಿ ಇದೆ. ಅವರಿಗೆ ವಾರ್ ರೂಂ ನೋಡಿಕೊಳ್ಳುವ ಕೆಲಸ ಕೊಟ್ಟವರು ಯಾರು? ಶೇ 5–6ರಷ್ಟು ಸಿಬ್ಬಂದಿ ಹಣ ಮಾಡುತ್ತಿರಬಹುದು, ಯಾಕೆಂದರೆ ಅವರಿಂದ ನೀವು ಲಕ್ಷಾಂತರ ರೂಪಾಯಿ ಲಂಚ ಪಡೆದು ಕೆಲಸ ಕೊಟ್ಟಿದ್ದೀರಿ, ವಿಧಾನಸೌಧದಲ್ಲೇ ತಪ್ಪು ಇಟ್ಟುಕೊಂಡು ಅಧಿಕಾರಿಗಳು, ಸಿಬ್ಬಂದಿಯತ್ತ ಕೈತೋರಿಸಬೇಡಿ’ ಎಂದರು.
ಓದಿ:ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ: ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ
ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಅವರು, 10 ಕೆಜಿ ಅಕ್ಕಿ ಕೊಡುವುದೇ ಮುಖ್ಯವಲ್ಲ, ಜನರ ಜೀವ ಉಳಿಸುವುದು ಮುಖ್ಯ. 70 ವರ್ಷದ ಆಡಳಿತದಲ್ಲಿ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ 30 ಹಾಸಿಗೆ ಆಸ್ಪತ್ರೆ ಕಟ್ಟಿದ್ದರೆ ಈ ಸ್ಥಿತಿ ಬರುತ್ತಿತ್ತಾ? ಸುಟ್ಟ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡಬೇಡಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.