ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಜೈಲು ಸೇರಿರುವ ನಾಲ್ವರು ಮತ್ತು ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಜಾಮೀನು ಅರ್ಜಿಯನ್ನು ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.
ಬಂಧಿತ ಆರೋಪಿಗಳಾದ ಪ್ರಶಾಂತ್ ರಂಕಾ, ನಿಯಾಜ್ ಮೊಹಮ್ಮದ್, ವೈಭವ್ ಜೈನ್ ಹಾಗೂ ಪ್ರತೀಕ್ ಶೆಟ್ಟಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿರುವ ಅಭಿಸ್ವಾಮಿ ಹಾಗೂ ಪ್ರಶಾಂತ್ ರಾಜು ಸಹ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಕಿದ್ದರು.
ಅರ್ಜಿದಾರರ ಪರ ವಕೀಲರ ವಾದ ಹಾಗೂ ಸಿಸಿಬಿ ಪರ ವಕೀಲರ ಆಕ್ಷೇಪಣೆ ಪರಿಶೀಲಿಸಿದ ನ್ಯಾಯಾಲಯ, ಎಲ್ಲರ ಅರ್ಜಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ, ‘ಡ್ರಗ್ಸ್ ಪ್ರಕರಣದಲ್ಲಿ ನಮ್ಮ ತಂಡ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿತ್ತು. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ’ ಎಂದು ಹೇಳಿದರು.