ಮೈಸೂರು: ರೈತರ ಹೋರಾಟಕ್ಕೆ ಮಣಿದು ಕೃಷಿ ಸಂಬಂಧಿ ಮೂರು ಕಾಯ್ದೆ ಹಿಂಪಡೆದಿರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನಿರಾಕರಿಸಿದರು.
ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಶನಿವಾರ ಇಲ್ಲಿಗೆ ಬಂದಿದ್ದ ಅವರು ಸಚಿವ ಕೆ.ಎಸ್.ಈಶ್ವರಪ್ಪ ಜೊತೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡರು.
ಈ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶೋಭಾ ಅವರು ಮಾತನಾಡುವುದಿಲ್ಲ ಎಂದು ಸನ್ನೆ ಮಾಡಿ ಹೊರಟರು.
ಆಗ ಅವರ ನೆರವಿಗೆ ಬಂದ ಈಶ್ವರಪ್ಪ, ‘ನಾನೇ ಹೇಳುತ್ತೇನೆ ಬಿಡಿ. ನಾನೂ ಕೇಂದ್ರ ಸರ್ಕಾರಕ್ಕೆ ಸೇರಿದವನು. ಕೃಷಿ ಕಾಯ್ದೆಯಲ್ಲಿನ ವಿಚಾರಗಳನ್ನು ದೇಶದ ಜನರಿಗೆ ಮನದಟ್ಟು ಮಾಡುವಲ್ಲಿ ವಿಫಲವಾಗಿರುವುದರಿಂದ ಕ್ಷಮೆ ಕೇಳುವುದಾಗಿ ಈಗಾಗಲೇ ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದರು.