ಬೆಳಗಾವಿ: ನಗರಪಾಲಿಕೆಯ ಪ್ರಥಮ ಕನ್ನಡ ಮೇಯರ್ ಸಿದ್ದನಗೌಡ ಪಾಟೀಲ (87) ಅವರು ವಯೋಸಹಜ ಅನಾರೋಗ್ಯದಿಂದ ಇಲ್ಲಿನ ಶಿವಬಸವನಗರದ ನಿವಾಸದಲ್ಲಿ ಬುಧವಾರ ನಿಧನರಾದರು.
ಅವರಿಗೆ ಪತ್ನಿ ಹಾಗೂ ದತ್ತು ಪುತ್ರ ಇದ್ದಾರೆ.
ಗಡಿ ನಾಡಾದ ಇಲ್ಲಿ 1956ರಿಂದಲೂ ಕನ್ನಡ ಚಳವಳಿಯ ಮುಂಚೂಣಿಯಲ್ಲಿದ್ದ ಅವರು 1984ರಲ್ಲಿ ನಗರಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. 1990ರಲ್ಲಿ ಪುನರಾಯ್ಕೆ ಆಗಿದ್ದರು. 1991ರಲ್ಲಿ ಪ್ರಥಮ ಕನ್ನಡ ಮೇಯರ್ ಆಗಿ ಆಯ್ಕೆಯಾಗಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮೂರು ಅವಧಿವರೆಗೆ ಹಾಗೂ ಕರ್ನಾಟಕ ಗ್ರಾಹಕರ ಮಹಾಮಂಡಳಿಯ ನಿರ್ದೇಶಕರಾಗಿ 20 ವರ್ಷಗಳವರೆಗೆ ಕಾರ್ಯನಿರ್ವಹಿಸಿದ್ದರು. ಎರಡೂವರೆ ವರ್ಷ ಮಹಾಮಂಡಳದ ಅಧ್ಯಕ್ಷರೂ ಆಗಿದ್ದರು.
ನಾಡು, ನುಡಿ, ಗಡಿ ಹೋರಾಟಗಳ ಮುಂಚೂಣಿಯಲ್ಲಿ ಇರುತ್ತಿದ್ದ ಅವರು, ಇಳಿ ವಯಸ್ಸಿನಲ್ಲೂ ಅವರು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಯುವ ಕನ್ನಡ ಪರ ಹೋರಾಟಗಾರರಿಗೆ ಪ್ರೇರಣೆಯಾಗಿದ್ದರು. ಅವರಿಗೆ ಸಮಾಜಸೇವೆಗಾಗಿ 2008ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಸಂದಿವೆ.
ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ ಸಂಘಟನೆಗಳ ಪರವಾಗಿ ಅಂತಿಮ ನಮನ ಸಲ್ಲಿಸಿದರು.