ಬೆಂಗಳೂರು: ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗಾಗಿ ದೆಹಲಿಯತ್ತ ಬಂದು ಮೂರು ಕಡೆಗಳಲ್ಲಿ ಬೀಡು ಬಿಟ್ಟಿರುವ ಸಾವಿರಾರು ಮಂದಿ ರೈತರ ನೆರವಿಗಾಗಿ ಯುವ ಕಾಂಗ್ರೆಸ್ ಮೂರು ಕ್ಯಾಂಪ್ಗಳಲ್ಲಿ ರೊಟ್ಟಿತಯಾರಿಸಿ ಹಂಚುತ್ತಿದೆ. ನಿತ್ಯವೂ 60,000ದಿಂದ 70,000 ರೊಟ್ಟಿಗಳನ್ನು ರೈತರಿಗೆ ಒದಗಿಸಲಾಗುತ್ತಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ,ಭದ್ರಾವತಿಯವರಾದ ಬಿ.ವಿ. ಶ್ರೀನಿವಾಸ್ ಅವರು, ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆಯಂತೆ ಈ ಕ್ಯಾಂಪ್ಗಳ ನೇತೃತ್ವ ವಹಿಸಿದ್ದಾರೆ. ರೊಟ್ಟಿ, ಅನ್ನ, ಸಬ್ಜಿ, ದಾಲ್, ಸಿಹಿ ತಯಾರಿಸಿ ಹಂಚಲಾಗುತ್ತಿದೆ. ಅಲ್ಲಿಯೇ ವೈದ್ಯಕೀಯ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
ಈ ಕುರಿತು ‘ಪ್ರಜಾವಾಣಿ‘ ಜತೆ ಮಾತನಾಡಿದ ಶ್ರೀನಿವಾಸ್, ‘ಟಿಕ್ರಿ ಗಡಿಯಲ್ಲಿ ಎರಡು, ಸಿಂಘು ಗಡಿಯಲ್ಲಿ ಮೂರು ಮತ್ತು ಗಾಜಿಪುರ ಕ್ಯಾಂಪ್ನಲ್ಲಿ ಒಂದು ರೊಟ್ಟಿ ತಯಾರಿಕಾ ಯಂತ್ರ ಅಳವಡಿಸಿದ್ದೇವೆ. ಪ್ರತಿದಿನ ಸುಮಾರು 60,000ದಿಂದ 70,000 ರೊಟ್ಟಿ ತಯಾರಿಸುತ್ತಿದ್ದೇವೆ’ ಎಂದರು.
ರಾಹುಲ್ ಗಾಂಧಿಯವರ ಸೂಚನೆಯಂತೆ ಸೇವಾ ಕಾರ್ಯವಾಗಿ ಈ ಕೆಲಸ ಮಾಡಲಾಗುತ್ತಿದೆ. ಪಕ್ಷದ ಬ್ಯಾನರ್ ಇಲ್ಲದೇ ಈ ಕೆಲಸ ನಡೆಯುತ್ತಿದೆ. ಆಹಾರ ತಯಾರಿಕೆಗೆ ಒಂದಷ್ಟು ವೆಚ್ಚವನ್ನು ಪಕ್ಷ ಭರಿಸುತ್ತಿದೆ. ಹಿಟ್ಟು, ಅಕ್ಕಿ, ತರಕಾರಿ ಸೇರಿದಂತೆ ಹೆಚ್ಚಿನ ಸಾಮಗ್ರಿಗಳನ್ನು ರೈತರೇ ತಂದು ಕೊಡುತ್ತಿದ್ದಾರೆ ಎಂದು ತಿಳಿಸಿದರು.
‘ಆಹಾರ ಒದಗಿಸುವುದರ ಜತೆಗೆ ರೈತರಿಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸುವುದಕ್ಕೂ ವ್ಯವಸ್ಥೆ ಮಾಡಲಾಗಿದೆ’ ಎಂದರು.