ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದೇಗೌಡ ಸಂದರ್ಶನ: ‘ನದಿ ಜೋಡಣೆ ವಿರುದ್ಧ ಸೊಲ್ಲೆತ್ತದ ಮೂರ್ಖ ಸಂಸದರು’

Last Updated 5 ಏಪ್ರಿಲ್ 2021, 19:54 IST
ಅಕ್ಷರ ಗಾತ್ರ

ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಸರ್ಕಾರ ತನ್ನ ಬ್ಲ್ಯಾಕ್‌ಮೇಲ್‌ ತಂತ್ರ ಮುಂದುವರಿಸಿದೆ. ಚುನಾವಣೆ ಹೊಸ್ತಿಲಲ್ಲಿದ್ದಾಗ ಪ್ರಧಾನಮಂತ್ರಿಯನ್ನು ಆಹ್ವಾನಿಸಿ ನದಿ ಜೋಡಣೆ ಯೋಜನೆಗೆ ಚಾಲನೆ ಕೊಡಿಸಿರುವುದು ಸಂಪೂರ್ಣ ರಾಜಕಾರಣ. ಪ್ರಧಾನಿ ಕೂಡ ತಮ್ಮ ಪಕ್ಷದ ಲಾಭಕ್ಕಾಗಿ ವಿವಾದಾತ್ಮಕ ಯೋಜನೆ ಉದ್ಘಾಟಿಸಿದ್ದಾರೆ ಎಂಬುದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಅವರ ಸ್ಪಷ್ಟೋಕ್ತಿ.ನದಿ ಜೋಡಣೆ ಯೋಜನೆಯಿಂದ ಸದ್ಯಕ್ಕೆ ಕರ್ನಾಟಕಕ್ಕೆ ತೊಂದರೆ ಇಲ್ಲದಿರಬಹುದು, ಆದರೆ ಮುಂದೆ ದೊಡ್ಡ ಅಪಾಯ ಸೃಷ್ಟಿಯಾಗಬಹುದು. ಕಾವೇರಿ ನಮ್ಮ ಜೀವನಾಡಿ ಎಂಬ ವಾದ ಕೇವಲ ಮಾತಿಗೆ ಸೀಮಿತವಾಗಬಾರದು; ಕೃತಿಯಲ್ಲೂ ಕಾಣಬೇಕು. ಈ ವಿಚಾರದಲ್ಲಿ ನಮ್ಮ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ಒತ್ತಾಯಿಸಿದರು.

* ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಸಿಕ್ಕ 14.75 ಟಿಎಂಸಿ ಅಡಿ ಹೆಚ್ಚುವರಿ ನೀರಿನಿಂದ ತೃಪ್ತಿಪಟ್ಟುಕೊಂಡ ಕರ್ನಾಟಕ ಸರ್ಕಾರ, ನದಿ ಜೋಡಣೆ ಯೋಜನೆಗೆ ಆಕ್ಷೇಪ ಸಲ್ಲಿಸುವಲ್ಲಿ ತಡ ಮಾಡಿದೆಯೇ?

ಕಾವೇರಿ ವಿಚಾರದಲ್ಲಿ ತಮಿಳುನಾಡು ಸರ್ಕಾರ, ಅಲ್ಲಿಯ ಹೋರಾಟಗಾರರು ಹಾಗೂ ವಿರೋಧ ಪಕ್ಷಗಳು ಏಕ ನಿಲುವು ಹೊಂದಿವೆ. ಆದರೆ ನಮ್ಮಲ್ಲಿ ಆ ರೀತಿಯ ಪರಿಸ್ಥಿತಿ ಇಲ್ಲ. ಹೋರಾಟಗಾರರ ಮೇಲೆ ಸರ್ಕಾರಕ್ಕೆ ವಿಶ್ವಾಸವೇ ಇಲ್ಲ. ತಮಿಳುನಾಡಿನಲ್ಲಿ ನದಿ ಜೋಡಣೆ ಕಾಮಗಾರಿಗೆ ಚಾಲನೆ ದೊರೆಯುವವರೆಗೂ ನಮ್ಮ ಸರ್ಕಾರಕ್ಕೆ ಆ ವಿಚಾರ ಗೊತ್ತೇ ಇರಲಿಲ್ಲ. ನೀರಾವರಿ ಇಲಾಖೆಯ ‘ಕಾವೇರಿ ಸೆಲ್‌’ ಏನು ಮಾಡುತ್ತಿತ್ತು, ಗುಪ್ತಚರ ಇಲಾಖೆಯ ವರದಿ ಇರಲಿಲ್ಲವೇ, ಸರ್ಕಾರದ ಯೋಜನಾ ಸಮಿತಿ ಎಲ್ಲಿತ್ತು? ಕಾಮಗಾರಿ ಚಾಲನೆಯಾಗುವುದಕ್ಕೆ ಮುನ್ನವೇ ಆಕ್ಷೇಪ ಎತ್ತಬೇಕಾಗಿತ್ತು. ನಾಡು, ನುಡಿ, ಜಲದ ರಕ್ಷಣೆ ವಿಚಾರದಲ್ಲಿ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಜಾಣ ಪೆದ್ದನ ರೀತಿ ನಡೆದುಕೊಳ್ಳುತ್ತಿದೆ.

* ನಮ್ಮ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಮೇಕೆದಾಟು ಯೋಜನೆಗೆ ಅನುಮೋದನೆ ಪಡೆಯಬಹುದಲ್ಲವೇ?

ಅನುಮೋದನೆ ಮಾತು ಹಾಗಿರಲಿ, ಈ ಮೂರ್ಖ ಸಂಸದರು ನದಿ ಜೋಡಣೆ ವಿಚಾರದಲ್ಲಿ ಲೋಕಸಭೆಯಲ್ಲಿ ಸೊಲ್ಲೆತ್ತಲಿಲ್ಲ. ಕಾಮಗಾರಿಗೆ ಪ್ರಧಾನಿ ಚಾಲನೆ ಕೊಟ್ಟ ನಂತರ ಚಳಿಗಾಲದ ಲೋಕಸಭಾ ಅಧಿವೇಶನ ನಡೆಯಿತು. ಯಾರಾದರೂ ಒಬ್ಬರು ಈ ವಿಚಾರ ಪ್ರಸ್ತಾಪ ಮಾಡಿದರಾ? ಎಲ್ಲರೂ ಬೇಡ, ಕಾವೇರಿ ಕಣಿವೆಯ 8 ಜಿಲ್ಲೆಯ ಸಂಸದರಾದರೂ ಧ್ವನಿ ಎತ್ತಬೇಕಾಗಿತ್ತು. ಕೊನೇ ಪಕ್ಷ ಮಂಡ್ಯ ಸಂಸದೆ ಸುಮಲತಾ ಅವರಾದರೂ ಮಾತನಾಡಬೇಕಾಗಿತ್ತು. 1996ರಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದ್ದಾಗ ನಮ್ಮದೇ ಕಾಂಗ್ರೆಸ್‌ ಸರ್ಕಾರವಿತ್ತು, ಪಿ.ವಿ.ನರಸಿಂಹರಾವ್‌ ಪ್ರಧಾನಿಯಾಗಿದ್ದರು. ನಾನು ಸಂಸತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಬಿಸಾಡಿ ಬಂದು ಹೋರಾಟಕ್ಕೆ ಧುಮುಕಿದೆ.

* ಇಷ್ಟು ದಿನ ಪಾಲಿನ ನೀರಿಗಾಗಿ ಹೋರಾಡಿದ್ದಾಯಿತು, ಈಗ ಹೆಚ್ಚುವರಿ ನೀರಿಗಾಗಿ ಹೋರಾಟ ನಡೆಸಬೇಕಾ?

ಹೋರಾಟ ಕರ್ನಾಟಕದ ಕರ್ಮ, ಇತಿಹಾಸವೇ ನಮಗೆ ಮೋಸ ಮಾಡಿದೆ. ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯ. ಇನ್ನು ಮುಂದೆಯಾದರೂ ಪರ್ಯಾಯ ಹೋರಾಟಗಳಿಗೆ ಕಡಿವಾಣ ಬೀಳಬೇಕು. ಸರ್ಕಾರ, ವಿರೋಧ ಪಕ್ಷಗಳು, ಹೋರಾಟಗಾರರು ಒಂದೇ ದಾರಿಯಲ್ಲಿ ನಡೆದು ನಮ್ಮ ನೀರಿನ ಹಕ್ಕನ್ನು ಉಳಿಸಿಕೊಳ್ಳಬೇಕು.

* ನದಿ ಜೋಡಣೆ ವಿಚಾರದಲ್ಲಿ ರೈತರ ನಿಲುವೇನು?

ಹೋರಾಟವೇ ರೈತರ ನಿಲುವು. ಮೇಕೆದಾಟು ಯೋಜನೆಗೆ ಕೂಡಲೇ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಬೇಕು. ಕೇಂದ್ರ ಸರ್ಕಾರ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು. ಒಂದು ರಾಜ್ಯದ ಪರವಾಗಿ ನಿಲ್ಲುವ ವಿಚಾರಕ್ಕೆ ನಮ್ಮ ದಿಕ್ಕಾರವಿದೆ.

* ಕೆರೆ, ಕಟ್ಟೆ, ಒಡ್ಡು ಕಟ್ಟಿದರೂ ತಮಿಳುನಾಡು ಕ್ಯಾತೆ ತೆಗೆಯುತ್ತದಲ್ಲ?

ಅದಕ್ಕೆ ನಮ್ಮ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ, ತಮಿಳುನಾಡು ಕ್ಯಾತೆ ವಿರುದ್ಧ ಹೋರಾಡುವ ಧೈರ್ಯ ಪ್ರದರ್ಶಿಸುವ ಕೆಲಸವಾಗಿಲ್ಲ. ಹಲವು ದಶಕದಿಂದ ನಮ್ಮ ರಾಜ್ಯದಲ್ಲಿ ಕಾವೇರಿ ನೀರು ಸದುಪಯೋಗ ಮಾಡಿಕೊಳ್ಳುವಂತಹ ಯಾವುದೇ ನೀರಾವರಿ ಯೋಜನೆಗಳು ನಡೆದಿಲ್ಲ. ಇದಕ್ಕೆ ತಮಿಳುನಾಡಿನ ಕ್ಯಾತೆ ಭಯವೂ ಒಂದು ಪ್ರಮುಖ ಕಾರಣ.

* ಮಂಡ್ಯ, ಮೈಸೂರು ಭಾಗದಲ್ಲಿ ರೈತರು ನೀರನ್ನು ಪೋಲು ಮಾಡುತ್ತಾರೆ ಎಂಬ ಆರೋಪವಿದೆಯಲ್ಲಾ?

ಹಳೆಯ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಕೇವಲ ಕಬ್ಬು, ಭತ್ತಕ್ಕೆ ಜೋತು ಬಿದ್ದಿದ್ದರು. ಹೀಗಾಗಿ ನೀರು ವ್ಯರ್ಥವಾಗುತ್ತಿದೆ ಎಂಬ ಅಭಿಪ್ರಾಯವಿತ್ತು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಜನರಲ್ಲಿ ಜಲಸಾಕ್ಷರತೆ ಬಂದಿದೆ. ತರಕಾರಿ, ತೋಟಗಾರಿಕೆ, ಹೂವು, ಹಣ್ಣು ಬೆಳೆಯುವ ಮೂಲಕ ನೀರನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.

* ಮಳೆ ಕುಗ್ಗುತ್ತಿದೆ, ನದಿ ನೀರಿನ ಇಳುವರಿ ಕಡಿಮೆಯಾಗುತ್ತಿದೆ, ಹೊಸ ಯೋಜನೆಗಳು ಸಾಕಾರಗೊಳ್ಳುವವೇ?

ಇರುವ ನೀರನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಸಮರೋಪಾದಿ ಕಾರ್ಯಕ್ರಮ ರೂಪಿಸಬೇಕು. ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಬೇಕು. ಕೆರೆಕಟ್ಟೆ ಒತ್ತುವರಿ ತೆರವುಗೊಳಿಸಿ ನೀರು ತುಂಬಿಸುವಲ್ಲಿ ಸಣ್ಣ ನೀರಾವರಿ ಇಲಾಖೆಯ ಪಾತ್ರ ದೊಡ್ಡದಿದೆ. ನಾಲೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸಿ ಕೊನೆ ಭಾಗಕ್ಕೂ ನೀರು ತಲುಪಿಸಬೇಕು. ಸಣ್ಣ ಸಣ್ಣ ನೀರಾವರಿ ಯೋಜನೆಗಳಿಂದ ರೈತರಿಗೆ ದೊಡ್ಡ ಲಾಭವಿದೆ.

**
ರಾಜ್ಯಕ್ಕೆ ಅನ್ಯಾಯ
ಮೇಕೆದಾಟು ಯೋಜನೆಗೆ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿದೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಲೋಕಸಭೆಯಲ್ಲಿ ಸಮರ್ಥವಾಗಿ ವಿಷಯ ಪ್ರತಿಪಾದನೆ ಮಾಡುತ್ತಿಲ್ಲ. ಇದರಿಂದಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಯೋಜನೆ ಸಾಕಾರಗೊಳಿಸಲು ಪ್ರಯತ್ನ ಮುಂದುವರಿಸಬೇಕು.
–ಡಿ.ಎಂ.ರವಿ ದೊಡ್ಡಪಾಳ್ಯ, ಶ್ರೀರಂಗಪಟ್ಟಣ

**
ಅಭಿಮಾನದ ಕೊರತೆ
ನಮ್ಮ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಕೊರತೆ ಇದೆ. ನಮ್ಮ ರಾಜ್ಯದ ಜನರಲ್ಲೂ ನಾಡು, ನುಡಿ, ಜಲದ ಬಗ್ಗೆ ಅಭಿಮಾನ ಕಡಿಮೆಯಾಗಿದೆ. ಅಭಿಮಾನದ ಕೊರತೆಯಿಂದ ರಾಜ್ಯಕ್ಕೆ ಪದೇಪದೇ ಅನ್ಯಾಯವಾಗುತ್ತಿದೆ. ನೀರಿನ ವಿಚಾರದಲ್ಲಿ ಸಮರ್ಥವಾಗಿ ಹೋರಾಟ ನಡೆಸುವವರು ರಾಜ್ಯದಲ್ಲಿ ಇಲ್ಲವಾಗಿದ್ದಾರೆ. ತಮಿಳುನಾಡು ಆಗಾಗ ಕ್ಯಾತೆ ತೆಗೆದು ರಾಜ್ಯಕ್ಕೆ ಅನ್ಯಾಯವಾಗುವಂತಹ ವಾತಾವರಣ ಸೃಷ್ಟಿಸುತ್ತಿದೆ.
–ಮಹಾದೇವು, ಮಳವಳ್ಳಿ

**
ಕೇಂದ್ರದ ಮೃದು ಧೋರಣೆ
ತಮಿಳುನಾಡಿನಲ್ಲಿ ಕಾವೇರಿ ನದಿಯ ಹೆಚ್ಚುವರಿ‌ ನೀರು ಬಳಸಿಕೊಳ್ಳಲು ನದಿ‌ ಜೋಡಣೆ‌ ಕಾರ್ಯ ಆರಂಭವಾಗಿರುವುದು ಆ ರಾಜ್ಯದ ಆಳುವ ಜನರ ಇಚ್ಛಾಶಕ್ತಿಯನ್ನು ತೋರುತ್ತದೆ. ಆ ಬದ್ಧತೆ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲದೇ ಇರುವುದು ವಿಪರ್ಯಾಸ. ಕೇಂದ್ರ ಸರ್ಕಾರ ಕೂಡ ತಮಿಳುನಾಡಿನ ಬಗ್ಗೆ‌ ಮೃದು ಧೋರಣೆ ಹೊಂದಿದೆ. ಈ ಬಗ್ಗೆ ಜನರೇ ಗಟ್ಟಿ ದನಿ ಎತ್ತುವ ಅನಿವಾರ್ಯತೆ‌ ಇದೆ.

**
ತಮಿಳುನಾಡು ಲಾಭ ಪಡೆದುಕೊಂಡಿದೆ
ತಮಿಳುನಾಡು ಸರ್ಕಾರ ಪ್ರತಿಬಾರಿಯೂ ನೀರಾವರಿ ವಿಚಾರದಲ್ಲಿ ಕರ್ನಾಟಕದ ಮೃದು ಧೋರಣೆಯ ಲಾಭ ಪಡೆದುಕೊಳ್ಳುತ್ತಿದೆ. ತಮಿಳುನಾಡಿಗೆ ಬಿಡಬೇಕಾದ ನೀರನ್ನು ಬಿಟ್ಟರೂ ತಗಾದೆ ತೆಗೆಯುತ್ತಲೇ ಇರುತ್ತದೆ. ಬಿಟ್ಟ ನೀರಿನ ಅಳತೆಯನ್ನು ಇಟ್ಟುಕೊಂಡರೆ ಒಳ್ಳೆಯದು. ಇದೀಗ ಮೇಕೆದಾಟು ವಿಚಾರದಲ್ಲೂ ತಗಾದೆ ತೆಗೆದಿದೆ. ಈ ಬಾರಿ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ರೈತರು ಬೀದಿಗಿಳಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT