ಮೈಸೂರು: ‘ನಾನು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದೇನೆಯೇ ಎಂಬುದನ್ನು ಆ ಸಂದರ್ಭ ಬಂದಾಗ ಹೇಳುತ್ತೇನೆ’ ಎಂದು ಶಾಸಕ, ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ್ ಹೇಳಿದರು.
ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಕಾಂಗ್ರೆಸ್ನಲ್ಲಿ ಕಾವು ಪಡೆದಿರುವ ಸಮಯದಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ನೀವು ಇದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಆ ಸಂದರ್ಭ ಬರಲಿ, ನೋಡೋಣ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಚರ್ಚೆ ಇಲ್ಲಿಗೆ ಸಾಕು: ‘ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅದರಲ್ಲಿ ನಾವೆಲ್ಲರೂ ಮತ್ತೆ ಗೆದ್ದು ಬರಬೇಕು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಈಗಲೇ ನಿರ್ಧರಿಸುವುದು ಅಪ್ರಸ್ತುತ’ ಎಂದರು.
‘ಒಂದಷ್ಟು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದು ಈಗ ದೊಡ್ಡ ಚರ್ಚೆಯಾಗಿ ಬೆಳೆದಿದೆ. ಈ ಚರ್ಚೆ ಇಲ್ಲಿಗೆ ಸಾಕು ಎಂದು ಪಕ್ಷದಲ್ಲಿರುವ ನನ್ನ ಸ್ನೇಹಿತರು ಮತ್ತು ಎಲ್ಲ ಮುಖಂಡರಿಗೆ ಮನವಿ ಮಾಡುತ್ತೇನೆ. ಈ ವಿಚಾರವನ್ನು ಇನ್ನಷ್ಟು ಬೆಳೆಸುವ ಅಗತ್ಯವಿಲ್ಲ’ ಎಂದು ತಿಳಿಸಿದರು.
‘ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲ ಶಾಸಕರ ಅಭಿಪ್ರಾಯ ಕೇಳಲಾಗುತ್ತದೆ. ಮುಖ್ಯಮಂತ್ರಿ ಆಯ್ಕೆಯ ತೀರ್ಮಾನವನ್ನು ಹೈಕಮಾಂಡ್ಗೆ ಬಿಡಲಾಗಿದೆ ಎಂಬ ನಿರ್ಣಯವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ತೆಗೆದುಕೊಳ್ಳುವುದು ವಾಡಿಕೆ. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮುಖ್ಯಮಂತ್ರಿ ಆಗುವ ಸಮರ್ಥರು ಯಾರಿದ್ದಾರೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದರು.