ಕಾಂಗ್ರೆಸ್ನವರು ನಿರುದ್ಯೋಗದ ದ್ಯೋತಕ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಲೇವಡಿ

ಬಾಗಲಕೋಟೆ: ’ಕಾಂಗ್ರೆಸ್ನವರು ಅಧಿಕಾರ ಕಳೆದುಕೊಂಡು ನಿರುದ್ಯೋಗಿಗಳು ಆದಾಗಲೆಲ್ಲಾ ಪಾದಯಾತ್ರೆ ಮಾಡುತ್ತಾರೆ. ಮೇಕೆದಾಟು ಯೋಜನೆ ವಿಚಾರದಲ್ಲೂ ಅದೇ ಆಗುತ್ತಿದೆ‘ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ 2012ರಲ್ಲಿ ’ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ‘ ಅಂತಾ ಹೋರಾಟ ಮಾಡಿ ಹೊಸಪೇಡೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿದ್ದರು. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಐದು ವರ್ಷಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಪ್ರತಿ ವರ್ಷ ₹10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಆಗ ಅವರು ಅಧಿಕಾರಕ್ಕೆ ಬಂದರೂ ಯೋಜನೆಗೆ ಖರ್ಚು ಮಾಡಿದ್ದು ಬರೀ ₹7728 ಕೋಟಿ ಎಂದರು.
’2012ರಲ್ಲಿ ನಮ್ಮದೇ(ಬಿಜೆಪಿ) ಸರ್ಕಾರ ಇತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ₹17,207 ಕೋಟಿ ಮೊತ್ತಕ್ಕೆ ಆಗ ಆಡಳಿತಾತ್ಮಕ ಮಂಜೂರಾತಿ ನೀಡಿದ್ದೆವು. ಅದನ್ನೇ ಕಾಂಗ್ರೆಸ್ನವರು ಮುಂದುವರೆಸಿದ್ದರೆ ಇಂದು ಯೋಜನಾ ವೆಚ್ಚ ₹60 ಸಾವಿರ ಕೋಟಿಗೆ ಹೆಚ್ಚುತ್ತಿರಲಿಲ್ಲ. ಹೀಗಾಗಿ ಮೇಕದಾಟು ವಿಚಾರದಲ್ಲಿ ಪಾದಯಾತ್ರೆ ಮಾಡಲು ಆ ಪಕ್ಷದ ಮುಖಂಡರಿಗೆ ಯಾವುದೇ ನೈತಿಕತೆ ಇಲ್ಲ‘ ಎಂದರು.
’ಮೇಕೆದಾಟು ಯೋಜನೆ ವಿಚಾರದಲ್ಲೂ ನಮ್ಮ ಪಾಲಿನ ನೀರನ್ನು ಖಂಡಿತವಾಗಲೂ ಉಪಯೋಗ ಮಾಡಿಕೊಳ್ಳುತ್ತೇವೆ. ಆದರೆ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಇರುವುದರಿಂದ ಅದು ಮುಗಿಯುವವರೆಗೂ ನಾವು ಕಾಯಬೇಕಾಗುತ್ತದೆ‘ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.