ಬೆಂಗಳೂರು: ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಹಾಗೂ ಸಿಐಟಿಯು ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳ ಸಾವಿರಾರು ನೌಕರರು ಪಾಲ್ಗೊಂಡಿದ್ದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಹಿಳೆಯರು ಹಾಗೂ ಇಳಿ ವಯಸ್ಸಿನವರೂ ಭಾಗಿಯಾಗಿದ್ದರು.
‘ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕೆಂಬ ಆದೇಶ ವಿದ್ದರೂ ಹಿಂದಿನ 10 ತಿಂಗಳಿಂದ ಸಂಬಳವನ್ನೇ ಕೊಟ್ಟಿಲ್ಲ. ಇದರಿಂದ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೇತನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
‘ಸರ್ಕಾರವು ವೃಂದ ಮತ್ತು ನೇಮ ಕಾತಿಗೆ ತಿದ್ದುಪಡಿ ತರುತ್ತಿರುವುದು ಸ್ವಾಗತಾರ್ಹ. ಈ ತಿದ್ದುಪಡಿ ವೇಳೆ ಗ್ರಾಮ ಪಂಚಾಯಿತಿ ನೌಕರರ ಹಿತವನ್ನು ಗಮನ ದಲ್ಲಿಟ್ಟುಕೊಳ್ಳ ಬೇಕು. ಕಾರ್ಯದರ್ಶಿ (ಗ್ರೇಡ್–2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ನೇಮ ಕಾತಿ ವೇಳೆ ಕ್ಲರ್ಕ್/ಡಾಟಾ ಎಂಟ್ರಿ ಆಪರೇಟರ್ಗಳನ್ನಷ್ಟೇ ಪರಿಗಣಿಸಲಾಗುತ್ತಿದೆ. ಇವರ ಜೊತೆಗೆ ಇತರ ವರ್ಗದ ನೌಕರರಿ
ಗೂ ನೇಮಕಾತಿಯಲ್ಲಿ ಅವಕಾಶ ಕಲ್ಪಿಸ ಬೇಕು’ ಎಂದು ಮನವಿ ಮಾಡಿದ್ದಾರೆ.
‘ಈ ತಿಂಗಳು ಹೊರಡಿಸಿರುವ ಕಾರ್ಯಕಾರಿ ಆದೇಶದಲ್ಲಿಕಾರ್ಯದರ್ಶಿ (ಗ್ರೇಡ್–2), ದ್ವಿತೀಯ ದರ್ಜೆ ಲೆಕ್ಕ ಸಹಾ ಯಕ ಹುದ್ದೆಗಳ ನೇಮಕಾತಿಗೆ ಅರ್ಹತಾ ಪರೀಕ್ಷೆ ನಿಗದಿಪಡಿಸಲಾಗಿದೆ. ಇದನ್ನು ಕೂಡಲೇ ಕೈಬಿಡಬೇಕು. ಕಂಪ್ಯೂಟರ್ ಆಪರೇಟರ್ಗಳಿಗೆ ಸೇವಾ ಅವಧಿಯ ಆಧಾರದಲ್ಲಿ ನೇರ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದ್ದಾರೆ.
ವಾಹನ ಸವಾರರಪರದಾಟ: ಗ್ರಾ.ಪಂ ನೌಕರರ ಪ್ರತಿಭಟನೆಯಿಂದಾಗಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು.
ಮೆಜೆಸ್ಟಿಕ್ನಿಂದ ಮಲ್ಲೇಶ್ವರಂ, ರೇಸ್ಕೋರ್ಸ್ ರಸ್ತೆ, ಕೆ.ಆರ್.ವೃತ್ತ, ವಿಧಾನಸೌಧದತ್ತ ಹೋಗಬೇಕಿದ್ದ ಸವಾರರು ಪರಿತಪಿಸುವಂತಾಯಿತು.
‘ಬೇಡಿಕೆ ಈಡೇರಿಕೆಯ ಭರವಸೆ’
‘ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ನಮ್ಮ ಅಹವಾಲುಗಳನ್ನು ಸಲ್ಲಿಸಿದ್ದೆವು. ಅವರು ಸಚಿವರೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮುಷ್ಕರ ಕೊನೆಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ತಿಳಿಸಿದರು.
‘ನಮ್ಮೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಅತೀಕ್ ಅವರು ಹೇಳಿದ್ದಾರೆ. ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಸಿದರು.
ಬೇಡಿಕೆಗಳು
lಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಕೂಲಿಯನ್ನು ಪರಿಷ್ಕರಿಸಬೇಕು. ಈ ಸಂಬಂಧ ಹೊಸ ಆದೇಶ ಹೊರಡಿಸಬೇಕು.
lಸಿಬ್ಬಂದಿಗೆ ಕಾಂಟ್ರಿಬ್ಯೂಟರಿ ಪಿಂಚಣಿ ನೀಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಹೀಗಾಗಿ ತುರ್ತಾಗಿ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು.
lಸಿಬ್ಬಂದಿಗೆ ವೇತನ ಹಾಗೂ ವಿ.ಡಿ.ಎ ಕೊಡಲು ಕೂಡಲೇ ₹700 ಕೋಟಿ ಹಣ ಬಿಡುಗಡೆ ಮಾಡಬೇಕು.
lರಾಜ್ಯದ ಎಲ್ಲಾ ನೌಕರರನ್ನು ಇ.ಎಫ್.ಎಂ.ಎಸ್ಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಬೇಕು.
lಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದವರಿಗೆ ಗ್ರ್ಯಾಚುಟಿ ನೀಡಬೇಕು.
lನೌಕರರ ಸಾವಿಗೆ ಪರೋಕ್ಷ ವಾಗಿ ಕಾರಣರಾದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.