ಬೆಂಗಳೂರು: ‘ನಾನು ಭಯಸ್ತನಲ್ಲ. ಮಾಗಡಿ ರಸ್ತೆಯಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದಿದ್ದೇನೆ. ಅದಕ್ಕೊಂದು ಚರಿತ್ರೆಯೇ ಇದೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಬಹುರೂಪಿ ಪ್ರಕಾಶನ ಹಾಗೂ ಲಂಡನ್ನ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನವು ನಗರದಲ್ಲಿ ಭಾನುವಾರ ಹಮ್ಮಿಕೊಂಡ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರ ಆತ್ಮಕಥೆ ‘ಯರೆಬೇವು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಾನು ವೇದಿಕೆಯೊಂದರಲ್ಲಿ ಆಡಿದ ಮಾತುಗಳು ವಿವಾದಕ್ಕೆ ಒಳಗಾಯಿತು. ಆಗ ಎಸ್.ಜಿ. ಸಿದ್ಧರಾಮಯ್ಯ ಅವರು ನನ್ನ ಬೆಂಬಲಕ್ಕೆ ನಿಂತು, ಧೈರ್ಯ ತುಂಬಿದರು. ಬ್ಲಡ್ ಫ್ರೈ ಬಗ್ಗೆ ಮಾತನಾಡಿದ್ದಕ್ಕೆ ಬ್ಲಡ್ ತಿನ್ನುವುದನ್ನು ಮರೆತವರು ಸಹ ನನ್ನ ಮೇಲೆ ಮುಗಿಬಿದ್ದರು’ ಎಂದು ಬೇಸರ ವ್ಯಕ್ತಪಡಿಸಿದರು.
‘ನುಡಿದರೆ ಮುತ್ತಿನ ಹಾರದಂತೆ ಇರಬೇಕು’ ಎಂದು ಹೇಳಲಾಗುತ್ತದೆ. ಆದರೆ, ಕೆಲ ಸಂದರ್ಭದಲ್ಲಿ ಮಾತು ಕುದಿಯುವ ಸಲಾಕೆಯೂ ಆಗುತ್ತದೆ. ದೇಶಿನೆಲೆಯಿಂದ ಬಂದವನು ನಾನು. ಹೀಗಾಗಿ, ಕೆಲವು ವೇಳೆ ನಮ್ಮೊಳಗಿನ ಮಾತು ಹೊರಹೊಮ್ಮುತ್ತದೆ’ ಎಂದರು.